ರಾಷ್ಟ್ರೀಯ

ಪಾಕ್ ನಿಂದ ಭಾರತದ ಮೇಲೆ ಸರ್ಜಿಕಲ್ ದಾಳಿಗೆ ಸಂಚು?

Pinterest LinkedIn Tumblr


ಹೊಸದಿಲ್ಲಿ: ಗಡಿ ನಿಯಂತ್ರಣಾ ರೇಖೆಯ ಭಾರತದ ಮುಂಚೂಣಿ ನೆಲೆಗಳನ್ನು ಗುರಿಯಾಗಿಸಿಕೊಂಡು ದೊಡ್ಡ ಮಟ್ಟದ ಸರ್ಜಿಕಲ್‌ ದಾಳಿ ನಡೆಸಲು ಪಾಕಿಸ್ತಾನ ಸೇನೆ ಮತ್ತು ಲಷ್ಕರೆ ತಯ್ಬಾ ಉಗ್ರ ಸಂಘಟನೆ ಹವಣಿಸುತ್ತಿವೆ ಎನ್ನುವ ಸಂಗತಿ ಬಯಲಾಗಿದೆ.

ದಾಳಿಗೆ ಪೂರಕವಾಗಿ ರಜೌರಿ ಮತ್ತು ಪೂಂಛ್‌ ವಲಯದಲ್ಲಿ ವಿಶೇಷ ಕಾರ್ಯಾಚರಣೆ ಪಡೆ (ಎಸ್‌ಎಸ್‌ಜಿ)ಗೆ ಸೇರಿದ ಪಾಕ್‌ ಸೇನಾ ಕಮಾಂಡೊಗಳು ಹಾಗೂ ಲಷ್ಕರೆ ಸಂಘಟನೆಯ ಉಗ್ರರ ಸಣ್ಣಗುಂಪುಗಳು ಸಕ್ರಿಯವಾಗಿವೆ ಎಂದು ಗುಪ್ತಚರ ಮೂಲಗಳು ಎಚ್ಚರಿಕೆ ನೀಡಿವೆ.

ಕುಪ್ವಾರ ಜಿಲ್ಲೆಯ ನೌಗಾಮ್‌ ಸೆಕ್ಟರ್‌ನ ಗಡಿ ಭಾಗದ ಭಾರತೀಯ ಸೇನಾ ನೆಲೆಗಳ ಮೇಲೆ ದಾಳಿ ನಡೆಸುವ ಸಂಚಿನೊಂದಿಗೆ ಕಳೆದ ಡಿಸೆಂಬರ್‌ 31ರಂದು ಪಾಕ್‌ ಸೇನೆ ಕಳಿಸಿಕೊಟ್ಟಿದ್ದ ತನ್ನ ಗಡಿ ಕಾರ್ಯ ಪಡೆ (ಬ್ಯಾಟ್‌) ಯೋಧರಿಬ್ಬರನ್ನು ಬಿಎಸ್‌ಎಫ್‌ ಹೊಡೆದುರುಳಿಸಿದೆ. ಹೀಗೆ ಯೋಧರನ್ನು ನುಗ್ಗಿಸಿದ್ದು ಸರ್ಜಿಕಲ್‌ ದಾಳಿ ಸಂಚಿನ ಭಾಗ ಎಂದು ವ್ಯಾಖ್ಯಾನಿಸಲಾಗಿದೆ. ಪಾಕಿಸ್ತಾನ ಸೇನೆ ಬ್ಯಾಟ್‌ ಸದಸ್ಯರನ್ನು ಭಾರತದ ಗಡಿಯೊಳಕ್ಕೆ ನುಗ್ಗಿಸಲು ಕಳೆದ ಒಂದು ವರ್ಷದ ಅವಧಿಯಲ್ಲಿ ಎರಡು ಬಾರಿ ಯತ್ನಿಸಿ ವಿಫಲಗೊಂಡಿದೆ. ಕಳೆದ ವರ್ಷ ಫೆಬ್ರವರಿ 23ರಂದು ಅಂತಹದ್ದೊಂದು ದುಸ್ಸಾಹಸ ನಡೆಸಿತ್ತು.

2017ರಲ್ಲಿ ಒಟ್ಟು ಐದು ಬಾರಿ ಪಾಕ್‌ ಸೇನೆಯಿಂದ ಭಾರತದ ಗಡಿ ನುಸುಳುವ ವಿಫಲ ಯತ್ನಗಳು ನಡೆದಿದ್ದವು. ಈ ಕಾರ್ಯಾಚರಣೆಗಳಲ್ಲಿ ಏಳು ನುಸುಳುಕೋರರನ್ನು ಭಾರತೀಯ ಸೇನೆ ಕೊಂದು ಹಾಕಿತ್ತು. ಪ್ರತಿಯಾಗಿ ಇಬ್ಬರು ಯೋಧರನ್ನು ಕಳೆದುಕೊಂಡಿತ್ತು.

ಸರ್ಜಿಕಲ್‌ ದಾಳಿ

2016ರಲ್ಲಿ ಉರಿ ಸೇನಾ ನೆಲೆಯ ಮೇಲೆ ಪಾಕ್‌ ಉಗ್ರರು ದಾಳಿ ನಡೆಸಿ ಅಟ್ಟಹಾಸ ಮೆರೆದ ಬಳಿಕ, ಅದೇ ವರ್ಷದ ಸೆಪ್ಟೆಂಬರ್‌ನಲ್ಲಿ ಭಾರತೀಯ ಸೇನಾ ಪಡೆಗಳು ಪಾಕ್‌ ಗಡಿ ಒಳ ನುಗ್ಗಿ ಸರ್ಜಿಕಲ್‌ ದಾಳಿ ನಡೆಸಿ ಸೇಡು ತೀರಿಸಿಕೊಂಡಿದ್ದವು. ಗಡಿ ಮುಂಚೂಣಿ ಭಾಗದಲ್ಲಿ ಸ್ಥಾಪನೆಗೊಂಡಿದ್ದ ಉಗ್ರರ ಅಡಗುದಾಣಗಳು ಅಂದು ಚಿಂದಿಯಾಗಿದ್ದವು.

Comments are closed.