ನವದೆಹಲಿ: ಇಂದು ನಡೆದ ಸಂಸತ್ ಅಧಿವೇಶನದಲ್ಲಿ ರಫೇಲ್ ಒಪ್ಪಂದದ ವಿಚಾರ ಮತ್ತೆ ಮೊಳಗಿತು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ವಿತ್ತ ಸಚಿವ ಅರುಣ್ ಜೇಟ್ಲಿ ನಡುವಿನ ವಾಕ್ ಸಮರಕ್ಕೆ ಸದನ ಸಾಕ್ಷಿಯಾಯಿತು. ಮೋದಿ ಅಧಿವೇಶನಕ್ಕೆ ಬಾರದೆ ತಮ್ಮ ಬೆಡ್ರೂಂನಲ್ಲಿ ಅಡಗಿಕೊಳ್ಳುತ್ತಿದ್ದಾರೆ ಎಂದು ರಾಹುಲ್ ಕುಹಕವಾಡಿದರು. ಇದಕ್ಕೆ ಪ್ರತ್ಯುತ್ತರ ನೀಡಿದ ಜೇಟ್ಲಿ ಕಾಂಗ್ರೆಸ್ ಸುಳ್ಳನ್ನೇ ಹೇಳುತ್ತದೆ ಎಂದರು.
“ನಮ್ಮ ಸರ್ಕಾರ 126 ಯುದ್ಧ ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿತ್ತು. ಆದರೆ ಈ ಒಪ್ಪಂದವನ್ನು ರದ್ದು ಮಾಡಿದ್ದೇಕೆ? ವಿಮಾನಗಳ ಸಂಖ್ಯೆಯನ್ನು 36ಕ್ಕೆ ಇಳಿಕೆ ಮಾಡಿದ್ದೇಕೆ? ರಾಷ್ಟ್ರದ ಭದ್ರತೆಯಲ್ಲಿ ಮೋದಿ ಬದಲಾವಣೆ ಮಾಡಿದರೇ? ಈ ಪ್ರಶ್ನೆಗಳಿಗೆ ಬಿಜೆಪಿ ಉತ್ತರಿಸಬೇಕು” ಎಂದು ರಾಹುಲ್ ಆಗ್ರಹಿಸಿದರು.
ಇನ್ನು ಒಪ್ಪಂದವನ್ನು ಅನಿಲ್ ಅಂಬಾನಿ ಸಂಸ್ಥೆಗೆ ಕೊಟ್ಟಿರುವ ಬಗ್ಗೆಯೂ ರಾಹುಲ್ ಪ್ರಶ್ನಿಸಿದರು. “ರಫೇಲ್ ಒಪ್ಪಂದ ನಡೆಯುವ 10 ದಿನಕ್ಕೂ ಮೊದಲು ಅನಿಲ್ ಅಂಬಾನಿ ಈ ಸಂಸ್ಥೆ ಆರಂಭಿಸಿದ್ದರು. ಡಸ್ಸಾಲ್ಟ್ ಸಂಸ್ಥೆ ಜೊತೆ ಮಾಡಿಕೊಂಡ ಒಪ್ಪಂದ ರದ್ದು ಮಾಡಿದ ಅದನ್ನು ನಿಮ್ಮ ಆಪ್ತ ಮಿತ್ರನಿಗೆ ನೀಡಿದ್ದೇಕೆ?” ಎಂದು ರಾಹುಲ್ ಪ್ರಶ್ನಿಸಿದರು.
ಧೈರ್ಯವಿದ್ದರೆ ಮೋದಿ ಸಂಸತ್ತಿಗೆ ಆಗಮಿಸಲಿ ಎಂದು ಪ್ರಧಾನಿಗೆ ರಾಹುಲ್ ಸವಾಲು ಹಾಕಿದರು. “ಮೋದಿ ಸುದ್ದಿ ವಾಹಿನಿಗಳಲ್ಲಿ ಗಂಟೆಗಟ್ಟಲೆ ಸಂದರ್ಶನ ನೀಡುತ್ತಾರೆ. ಆದರೆ, ಸಂಸತ್ತಿಗೆ ಬರುವುದಿಲ್ಲ. ಬೆಡ್ರೂಂನಲ್ಲಿ ಅಡಗಿಕೂರುವ ಬದಲು ಧೈರ್ಯವಿದ್ದರೆ ಮೋದಿ ಅಧಿವೇಶನಕ್ಕೆ ಬಂದು ಮಾತನಾಡಲಿ” ಎಂದರು. ಇನ್ನು, ರಫೇಲ್ ಒಪ್ಪಂದದ ಬಗ್ಗೆ ಕಾಂಗ್ರೆಸ್ ಬಿಡುಗಡೆ ಮಾಡಿದ ಆಡಿಯೋ ಕ್ಲಿಪ್ ವಿಚಾರವೂ ಸದನದಲ್ಲಿ ಪ್ರಸ್ತಾಪವಾಯಿತು.
ರಾಹುಲ್ ಗಾಂಧಿ ಹೇಳಿಕೆಗೆ ಅರುಣ್ ಜೇಟ್ಲಿ ತಿರುಗೇಟು ನೀಡಿದರು. ರಾಹುಲ್ ದೇಶದ ಜನತೆಗೆ ನಿರಂತರವಾಗಿ ಸುಳ್ಳು ಹೇಳುತ್ತಿದ್ದಾರೆ ಎಂದರು. “ರಾಹುಲ್ ಹಾಗೂ ಕಾಂಗ್ರೆಸ್ ಪಕ್ಷ ದೇಶಕ್ಕೆ ಸುಳ್ಳನ್ನು ಹೇಳುತ್ತಿದೆ. ಅಷ್ಟೇ ಅಲ್ಲ, ಸುಪ್ರೀಂಕೋರ್ಟ್ ನೀಡಿದ ಆದೇಶಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಕೆಲವರು ಸತ್ಯವನ್ನು ಇಷ್ಟಪಡುವುದೇ ಇಲ್ಲ” ಎಂದು ರಾಹುಲ್ ಅವರನ್ನು ಜೇಟ್ಲಿ ಟೀಕಿಸಿದರು.
ಇದೇ ವೇಳೆ ರಾಷ್ಟ್ರದ ಭದ್ರತೆ ಜೊತೆಗೆ ಯುಪಿಎ ಸರ್ಕಾರ ಆಟವಾಡಿದೆ ಎಂದು ಜೇಟ್ಲಿ ಬಲವಾಗಿ ಆರೋಪಿಸಿದರು. ನ್ಯಾಷನಲ್ ಹೆರಾಲ್ಡ್ ಹಾಗೂ ಅಗಸ್ತಾ ವೆಸ್ಟ್ ಲ್ಯಾಂಡ್ ಪ್ರಕರಣಗಳನ್ನು ಉಲ್ಲೇಖಿಸಿ ಮಾತನಾಡಿದ ಜೇಟ್ಲಿ, “ಕೆಲವರಿಗೆ ಹಣದ ಮೌಲ್ಯ ಮಾತ್ರ ಅರ್ಥವಾಗುತ್ತದೆ. ಆದರೆ ದೇಶದ ಭದ್ರತೆ ವಿಚಾರ ಅವರಿಗೆ ತಿಳಿಯುವುದೇ ಇಲ್ಲ. ಯುಪಿಎ ಸರ್ಕಾರ ಈ ಮೊದಲು ದೇಶದ ಭದ್ರತೆ ಜೊತೆಗೆ ಆಟವಾಡಿತ್ತು. ರಫೇಲ್ ಒಪ್ಪಂದದಲ್ಲಿ ಕಾಂಗ್ರೆಸ್ ಇಂದು ಟೇಪ್ ಬಿಡುಗಡೆ ಮಾಡಿದೆ. ಆದರೆ ಅದರ ಸತ್ಯಾಸತ್ಯತೆಯನ್ನು ಸಾಬೀತು ಮಾಡಲು ರಾಹುಲ್ ಹಿಂಜರಿಯುತ್ತಿದ್ದಾರೆ. ಯುದ್ಧ ವಿಮಾನದ ಬಗ್ಗೆ ರಾಹುಲ್ಗೆ ಜ್ಞಾನವಿಲ್ಲ” ಎಂದರು ಟೀಕಿಸಿರುವ ಜೇಟ್ಲಿ, “ಈ ಒಪ್ಪಂದ ನಡೆಯುವುದಕ್ಕೂ ಮೊದಲು 74 ಬಾರಿ ಸಭೆ ಕರೆದಿದ್ದೇವೆ. ಅಗಸ್ಟಾ ವೆಸ್ಟ್ ಲ್ಯಾಂಡ್, ಬೋಫೋರ್ಸ್ ಹಗರಣಗಳಿಂದ ಕಾಂಗ್ರೆಸ್ ಕೈ ಕೆಸರಾಗಿದೆ” ಎಂದು ಟೀಕಿಸಿದರು.
Comments are closed.