ನವದೆಹಲಿ: ಉತ್ತರಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ರ್ಯಾಲಿ ನಂತರ ನಡೆದ ಕಲ್ಲು ತೂರಾಟದಲ್ಲಿ ಪೊಲೀಸ್ ಕಾನ್ಸ್ಟೇಬಲ್ ಓರ್ವ ಸಾವನ್ನಪ್ಪಿರುವ ಧಾರುಣ ಘಟನೆ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಅವರು, ಇಂದು ಘಾಝಿಪುರದಲ್ಲಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು. ಪ್ರಧಾನಿ ರ್ಯಾಲಿ ನಡೆದ ಎರಡೇ ಗಂಟೆಗಳಲ್ಲಿ ಐವತ್ತು ಜನರ ಗುಂಪೊಂದು ಪ್ರತಿಭಟನೆ ನಡೆಸಿತ್ತು. ಈ ವೇಳೆ ಪ್ರತಿಭಟನೆ ಬಿಸಿ ಹಿಂಸಾಚಾರಕ್ಕೆ ತಿರುಗಿ ಕಲ್ಲು ತೂರಾಟ ನಡೆದಿದೆ. ಈ ಕಲ್ಲು ತೂರಾಟಕ್ಕೆ ಪೊಲೀಸ್ ಕಾನ್ಸ್ಟೇಬಲ್ ಓರ್ವ ಬಲಿಯಾಗಿದ್ಧಾರೆ.
ಘಾಝಿಪುರದಲ್ಲಿ ಹತ್ಯೆಯಾದ ಪೊಲೀಸ್ ಕಾನ್ಸ್ಟೆಬಲ್ ಅನ್ನು ಸುರೇಶ್ ವತ್ಸ್ ಎಂದು ಗುರುತಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ರ್ಯಾಲಿ ಮುಗಿಸಿ ಪೊಲೀಸ್ ಠಾಣೆಗೆ ಹಿಂತಿರುಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಪ್ರಧಾನಿ ರ್ಯಾಲಿಯನ್ನು ಉದ್ದೇಶಸಿ ಮಾತಾಡಿದ್ದ ಸ್ಥಳದಲ್ಲಿಯೇ ನಿಶಾದ್ ಎಂಬ ಸಮುದಾಯದವರು ಮೀಸಲಾತಿಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರು.
ಪ್ರತಿಭಟನಾನಿರತ ಗುಂಪು ಚದುರಿಸಲು ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿತ್ತು. ಈ ವೇಳೆ ಪೊಲೀಸ್ ಹಾಗೂ ಪ್ರತಿಭಟನಕಾರರ ನಡುವೇ ಕೆಲ ಕಾಲ ಮಾತಿನ ಚಕಾಮಕಿ ನಡೆಯಿತು. ಸುರೇಶ್ ಅವರನ್ನು ಒಳಗೊಂಡಿದ್ದ ಪೊಲೀಸ್ ತಂಡ ಅಲ್ಲಿಯೇ ಪ್ರತಿಭಟನೆಗೆ ಸೇರಿದ್ದ ಎಲ್ಲರನ್ನು ತೆರವುಗೊಳಿಸಲು ಮುಂದಾಯಿತು. ಆಕ್ರೋಶದಲ್ಲಿದ್ದ ಪ್ರತಿಭಟನಕಾರರು ಕಲ್ಲು ತೂರಾಟ ನಡೆಸಿದ್ದಾರೆ. ಅಲ್ಲಿಯೇ ಪೊಲೀಸ್ ತಂಡದಲ್ಲಿದ್ದ ಕಾನ್ಸ್ಟೇಬಲ್ ಸುರೇಶ್ ಕಲ್ಲು ತೂರಾಟದಲ್ಲಿ ಭಾರೀ ಗಾಯಗೊಂಡಿದ್ದಾರೆ. ಇನ್ನೇನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರಾವನಿಸುತ್ತಿದ್ದ ವೇಳೆ ದಾರಿ ಮಧ್ಯೆಯೇ ಕೊನೆಯುಸಿರು ಎಳೆದಿದ್ದಾರೆ.
ಇನ್ನು ಆರೋಪಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸೂಚಿಸಿದ್ಧಾರೆ. ಅಲ್ಲದೇ ಕಾನ್ಸ್ಟೆಬಲ್ ಸುರೇಶ್ ವತ್ಸ್ ಅವರ ಪತ್ನಿಗೆ 40 ಲಕ್ಷ ರೂ ಪರಿಹಾರ ಧನ ಘೋಷಿಸಲಾಗಿದೆ. ಮುಂದೆ ತಮ್ಮ ಮಕ್ಕಳ ಶಿಕ್ಷಣದ ವೆಚ್ಚವನ್ನು ಸರ್ಕಾರವೇ ಭರಿಸುವುದಾಗಿ ಸಿಎಂ ಕಚೇರಿಯಿಂದ ಬಿಡುಗಡೆಯಾದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಈ ಹಿಂದೆಯೂ ಉತ್ತರಪ್ರದೇಶದಲ್ಲಿ ಅಕ್ರಮ ಕಸಾಯಿ ಖಾನೆಗಳ ವಿರುದ್ಧ ಹಲವು ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದವು. ತಾರಕಕ್ಕೇರಿದ್ದ ಪ್ರತಿಭಟನೆಯೂ ಹಿಂಸಾಚಾರಕ್ಕೆ ತಿರುಗಿತ್ತು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಕಾರರ ನಡುವೇ ಮಾತಿನ ಚಕಾಮಕಿ ನಡೆದಿದೆ. ಆಕ್ರೋಶಗೊಂಡ ಪ್ರತಿಭಟನಕಾರರು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ್ದಾರೆ. ಅಲ್ಲದೇ ಪೊಲೀಸರ ಮೇಲೆಯೂ ದಾಳಿ ನಡೆಸಿದ್ದು, ಈ ಗಲಭೆಯಲ್ಲಿ ಇನ್ಸ್ಪೆಕ್ಟರ್ ಸುಭೋದ್ ಕುಮಾರ್ ಸಿಂಗ್ ಎನ್ನುವವರು ಸಾವನ್ನಪ್ಪಿದ್ದರು.
Comments are closed.