ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಭಾರತೀಯ ಸೇನೆಗೆ ಹೆಚ್ಚು ಮನಸ್ಥೈರ್ಯ ತುಂಬುತ್ತಿರುವುದರಿಂದ ಉತ್ಸಾಹಗೊಂಡಿರುವ ಯೋಧರು ಸಹ ಕಠಿಣ ಪರಿಸ್ಥಿತಿಯಲ್ಲೂ ತಮ್ಮ ಕರ್ತವ್ಯವನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ. 17 ಸಾವಿರ ಅಡಿಗಳ ಮೇಲಿನ ಸಿಯಾಚಿನ್ ಗ್ಲೇಸಿಯರ್ ನಲ್ಲಿ ಪತನಗೊಂಡಿದ್ದ ಯುದ್ಧ ಹೆಲಿಕಾಫ್ಟರ್ ಅನ್ನು ಭಾರತೀಯ ಯೋಧರು ರಿಪೇರಿ ಮಾಡಿ ಬೇಸ್ ಕ್ಯಾಂಪ್ ವಾಪಸ್ ತರುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದಾರೆ.
1984ರ ಏಪ್ರಿಲ್ 13ರಂದು ಆಪರೇಷನ್ ಮೇಘದೂತ್ ಅನ್ನು ಪ್ರಾರಂಭಿಸಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೂ ಸರಿ ಸುಮಾರು 40 ಹೆಲಿಕಾಪ್ಟರ್ ಗಳು ಗ್ಲೇಸಿಯರ್ ನಲ್ಲಿ ಕೆಟ್ಟು ನಿಂತಿವೆ ಅಥವಾ ಅಪಘಾತಕ್ಕೀಡಾಗಿವೆ. ಈ ಹೆಲಿಕಾಫ್ಟರ್ ಗಳನ್ನು ವಾಪಸ್ ತರಲು ಸಾಧ್ಯವಾಗಿರಲಿಲ್ಲ. ಇದೇ ಮೊದಲ ಬಾರಿಗೆ ಭಾರತೀಯ ಸೇನೆ ಯುದ್ಧ ಹೆಲಿಕಾಫ್ಟರ್ ರಿಪೇರಿ ಮಾಡುವ ಮೂಲಕ ವಿಶ್ವದಾಖಲೆ ಮಾಡಿದೆ.
ಕಳೆದ ಜನವರಿಯಲ್ಲಿ ಎಎಲ್ಎಚ್ ಧ್ರುವ ಹೆಲಿಕಾಫ್ಟರ್ ಸೈನಿಕರಿಗೆ ನಿತ್ಯ ಬಳಕೆಯ ವಸ್ತುಗಳನ್ನು ಪೂರೈಸಲು ಗ್ಲೇಸಿಯರ್ ಗೆ ತೆರಳಿತ್ತು. ಈ ಸಂದರ್ಭದಲ್ಲಿ ಹೆಲಿಕಾಪ್ಟರ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಪೈಲೆಟ್ ತಕ್ಷಣ ಹೆಲಿಕಾಪ್ಟರ್ ಅನ್ನು ಮಂಜಿನ ಮೇಲೆ ಇಳಿಸಿದ್ದರು. ಆ ನಂತರ ಹೆಲಿಕಾಪ್ಟರ್ ಹಿಮದಲ್ಲಿ ಸಿಲುಕಿತ್ತು. ಅದನ್ನು ಅಲ್ಲಿಂದ ಬಿಡಿಸಿ ಮತ್ತೆ ವಾಪಸ್ ತರಲು ಸಾಧ್ಯವಾಗಿರಲಿಲ್ಲ. ಮೈನಸ್ 25ರಿಂದ 30 ಡಿಗ್ರಿ ಸೆಲ್ಸಿಯಸ್ ತಾಪಮಾನವಿರುವ ಈ ಪ್ರದೇಶದಲ್ಲಿ ಹೆಲಿಕಾಪ್ಟರ್ ಅನ್ನು ರಿಪೇರಿ ಮಾಡುವುದು ಸಾಧ್ಯವಾಗಿರಲಿಲ್ಲ.
ಆದರೆ ಭಾರತೀಯ ಯೋಧರು ಛಲ ಬಿಡದೆ ಎಎಲ್ಎಚ್ ಸ್ಕ್ವಾಡ್ರನ್ 203 ನ ಪೈಲಟ್ ಗಳು ಮತ್ತು ತಂತ್ರಜ್ಞರು ಹೆಲಿಕಾಪ್ಟರ್ ಅನ್ನು ಕಳೆದ ಜುಲೈನಲ್ಲಿ ರಿಪೇರಿ ಮಾಡಿಲು ಯಶಸ್ವಿಯಾಗಿದ್ದರು. ನಂತರ ಪೈಲಟ್ ಗಳು ಹೆಲಿಕಾಪ್ಟರ್ ಅನ್ನು ಸುರಕ್ಷಿತವಾಗಿ ಸಿಯಾಚಿನ್ ಬೇಸ್ ಕ್ಯಾಂಪ್ ಗೆ ತಂದಿದ್ದಾರೆ.
Comments are closed.