ಕಣ್ಣೂರು: ಕೇರಳದ ಕಣ್ಣೂರು ಜಿಲ್ಲೆಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾನುವಾರ ಉದ್ಘಾಟಿಸಿದ್ದಾರೆ. ಬೆಳಿಗ್ಗೆ 10 ಗಂಟೆಗೆ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕೇಂದ್ರ ವಿಮಾನಯಾನ ಸಚಿವ ಸುರೇಶ್ ಪ್ರಭು ಕಣ್ಣೂರಿನಿಂದ ಅಬುದಾಬಿಗೆ ಹಾರಾಟ ನಡೆಸುವ ಏರ್ ಇಂಡಿಯಾ ಏಕ್ಸ್ಪ್ರೆಸ್ ವಿಮಾನಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ವಿಮಾನಯಾನಕ್ಕೆ ಚಾಲನೆ ನೀಡಿದರು.
ಏರ್ ಇಂಡಿಯಾದ 737 ಬೋಯಿಂಗ್ ವಿಮಾನ ಕಣ್ಣೂರಿನಿಂದ ಚೊಚ್ಚಲ ಹಾರಾಟ ನಡೆಸಿದ್ದು, ಇದರಲ್ಲಿ 185 ಮಂದಿ ಪ್ರಯಾಣಿಕರಿದ್ದರು. ಇದೇ ವಿಮಾನ ಇಂದು ಸಂಜೆ ಕಣ್ಣೂರು ವಿಮಾನ ನಿಲ್ದಾಣಕ್ಕೆ ಅಬುಧಾಬಿಯಿಂದ ವಾಪಸ್ ಆಗಲಿದೆ. ನಾಳೆಯಿಂದ ಅಂತರಾಷ್ಟ್ರೀಯ ಪ್ರಯಾಣದ ಸರಿಯಾದ ಸೇವೆ ಲಭ್ಯವಾಗಲಿದೆ ಎಂದು ಏರ್ಪೋರ್ಟ್ ಆಡಳಿತ ಮಂಡಳಿ ತಿಳಿಸಿದೆ.
ಬೆಂಗಳೂರು ಟು ಕಣ್ಣೂರು
ಬೆಳಿಗ್ಗೆ ಬೆಂಗಳೂರಿನಿಂದ ಗೋ ಏರ್ ವಿಮಾನ ಕಣ್ಣೂರಿನ ಹೊಸ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದ್ದು, ಮುಂದಿನ ದಿನಗಳಲ್ಲಿ ಬೆಂಗಳೂರಿನಿಂದ ಗೋ ಏರ್ ವಿಮಾನ ಮತ್ತು ಇಂಡಿಗೊ ವಿಮಾನಗಳು ಕಣ್ಣೂರಿಗೆ ವಿಮಾನ ಸೇವೆಯನ್ನು ಒದಗಿಸಲಿದೆ.
ಮಡಿಕೇರಿ-ಮೈಸೂರು ಜನರಿಗೆ ಅನುಕೂಲ
ಕಣ್ಣೂರು ಏರ್ಪೋರ್ಟ್ ಉದ್ಘಾಟನೆಯಿಂದ ಕೇರಳದ ಗಡಿ ಜಿಲ್ಲೆಗಳಾದ ಕೊಡಗು ಮತ್ತು ಮೈಸೂರು ಭಾಗದ ಜನರಿಗೆ ಅನುಕೂಲವಾಗಲಿದೆ. ಕೊಡಗು ಮತ್ತು ಮೈಸೂರು ಜಿಲ್ಲೆಗಳ ವಿಮಾನ ಪ್ರಯಾಣಿಕರು ಬೆಂಗಳೂರು ಮತ್ತು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಆಶ್ರಯಿಸುತ್ತಿದ್ದು, ಇನ್ನುಮುಂದೆ ಈ ಎರಡು ಏರ್ಪೋರ್ಟ್ಗಳಿಗಿಂತಲೂ ಕಣ್ಣೂರು ವಿಮಾನ ನಿಲ್ದಾಣ ಹತ್ತಿರವಾಗಲಿದೆ.
ನಗರ ಮತ್ತು ವಿಮಾನ ನಿಲ್ದಾಣ ದೂರ (ಕಿ.ಮೀ)
ಮೈಸೂರು – ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣ 184 kms
ಮೈಸೂರು – ಕಣ್ಣೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ 158 kms
ಮಡಿಕೇರಿ – ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣ 275 kms
ಮಡಿಕೇರಿ – ಕಣ್ಣೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ 90 kms
ಮಡಿಕೇರಿ – ಮೈಸೂರು ವಿಮಾನ ನಿಲ್ದಾಣ 130 kms
ವಿರಾಜಪೇಟೆ – ಕಣ್ಣೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ 59 kms
Comments are closed.