ರಾಷ್ಟ್ರೀಯ

ಬುಲಂದ್​​ಶಹರ್​​​ ಹಿಂಸಾಚಾರ: ಪೊಲೀಸ್​ ಅಧಿಕಾರಿ ಸಾವು ಆಕಸ್ಮಿಕ: ಯೋಗಿ​!

Pinterest LinkedIn Tumblr


ನವದೆಹಲಿ: ಉತ್ತರಪ್ರದೇಶದ ಬುಲಂದ್​ ಶಹರ್​ನಲ್ಲಿ ದೊಂಬಿ ಹಿಂಸಾಚಾರಕ್ಕೆ ಬಲಿಯಾದ ನಿಷ್ಠಾವಂತ ಪೊಲೀಸ್​​ ಅಧಿಕಾರಿಯ ಸಾವಿನ ಬಗ್ಗೆ ಸಿಎಂ ಯೋಗಿ ಆದಿತ್ಯನಾಥ್​​ ಅವರು ಕೊನೆಗೂ ಮೌನ ಮುರಿದಿದ್ಧಾರೆ. ಸುಬೋಧ್​​​ ಕುಮಾರ್​​ ಸಿಂಗ್​ ಅವರ ಸಾವು ನೋವು ತಂದಿದೆ. ಇದೊಂದು ಆಕಸ್ಮಿಕ ಸಾವು. ಇದಕ್ಕೆ ಪ್ರತಿಭಟನಾ ಸ್ಥಳದಲ್ಲಿದ್ದ ಪ್ರತಿಯೊಬ್ಬರು ಹೊಣೆಯಾಗಿದ್ದಾರೆ. ಪ್ರಮಾಣಿಕ ಅಧಿಕಾರಿಯ ಸಾವಿಗೆ ಕಾರಣರಾದ ಎಲ್ಲರಿಗೂ ತಕ್ಕ ಶಿಕ್ಷೆಯಾಗಬೇಕು ಎಂದು ಪ್ರತಿಕ್ರಿಯಿಸಿದ್ಧಾರೆ ಎನ್ನಲಾಗಿದೆ.

ಹಾಗೆಯೇ ಮೃತಪಟ್ಟ ಪೊಲೀಸ್ ಇನ್ಸ್ ಪೆಕ್ಟರ್ ಸುಬೋಧ್ ಕುಮಾರ್ ಸಿಂಗ್ ಅವರ ಹೆಸರನ್ನು ರಸ್ತೆ ಜೊತೆಗೆ ಕಾಲೇಜ್​ವೊಂದಕ್ಕೆ ಇಡುವುದಾಗಿ ಹೇಳಿದರು. ಮೃತ ಇನ್ಸ್ ಪೆಕ್ಟರ್ ಅವರ ಕುಟುಂಬಸ್ಥರನ್ನು ಭೇಟಿ ಮಾಡಿದ ನಂತರ, ಸಿಎಂ ಯೋಗಿ ಆದಿತ್ಯನಾಥ್ ಈ ವಿಚಾರ ಘೋಷಣೆ ಮಾಡಿದ್ದಾರೆ ಎನ್ನಲಾಗಿದೆ. ಇತಾಹ್ ಗ್ರಾಮದ ಪ್ರಮುಖ ರಸ್ತೆಯಾದ ಜೈತರಿ-ಕುರೋಳಿ ಎಂಬ ರಸ್ತೆಗೆ ‘ಸುಬೋಧ್ ಕುಮಾರ್ ಸಿಂಗ್ ಶಾಹಿದ್ ಮಾರ್ಗ್’ ಎಂದು ಮರು ನಾಮಕರಣ ಮಾಡಲಾಗುವುದು. ನಂತರ ಶೈಕ್ಷಣಿಕ ಸಂಸ್ಥೆಯೊಂದಕ್ಕೆ ಕೂಡ ಇನ್ಸ್ ಪೆಕ್ಟರ್ ಹೆಸರನ್ನೇ ಇಡಲಾಗುವುದು ಎಂದು ಭರವಸೆ ನೀಡಿದ್ದಾಗಿ ತಿಳಿದು ಬಂದಿದೆ.

ಈಗಾಗಲೇ ಸಿಎಂ ಮೃತ ಪೊಲೀಸ್​​ ಕುಟುಂಬಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ನೆರವು ನೀಡುವುದಾಗಿ ತಿಳಿಸಿದ್ದಾರೆ. ಅಲ್ಲದೇ 50 ಲಕ್ಷ ರೂ. ಪರಿಹಾರವನ್ನು ಕೂಡ ನೀಡಲಾಗಿದೆ. ಜೊತೆಗೆ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮಾಡಿದ ಸಾಲವನ್ನು ತೀರಿಸಿ, ತಮ್ಮ ವಿಧ್ಯಾಭ್ಯಾಸದ ಜವಾಬ್ದಾರಿಯನ್ನು ಕೂಡ ಸರ್ಕಾರವೇ ಹೊರಲಿದೆ. ಮೃತ ಇನ್ಸ್​ಪೆಕ್ಟರ್ ಪತ್ನಿ ಅವರಿಗೆ ವಿಶೇಷ ಪಿಂಚಣಿ, ಮಕ್ಕಳ ವಿದ್ಯಾಭ್ಯಾಸ, ಮನೆ ನಿರ್ಮಾಣಕ್ಕಾಗಿ ಮಾಡಿದ್ದ 30 ಲಕ್ಷ ಸಾಲ ತೀರಿಸುವುದಾಗಿ ಹೇಳಲಾಗಿದೆ. ಅದರ ಸಂಪೂರ್ಣ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಂಡಿದೆ ಎನ್ನಲಾಗಿದೆ.

ಏನಿದು ಕೇಸ್​​?: ಉತ್ತರಪ್ರದೇಶದಲ್ಲಿ ಅಕ್ರಮ ಕಸಾಯಿ ಖಾನೆಗಳ ವಿರುದ್ಧ ಹಲವು ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದವು. ತಾರಕಕ್ಕೇರಿದ್ದ ಪ್ರತಿಭಟನೆಯೂ ಹಿಂಸಾಚಾರಕ್ಕೆ ತಿರುಗಿತ್ತು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಕಾರರ ನಡುವೇ ಮಾತಿನ ಚಕಾಮಕಿ ನಡೆದಿದೆ. ಆಕ್ರೋಶಗೊಂಡ ಪ್ರತಿಭಟನಕಾರರು ಪೊಲೀಸ್​ ಠಾಣೆಗೆ ಬೆಂಕಿ ಹಚ್ಚಿದ್ದಾರೆ. ಅಲ್ಲದೇ ಪೊಲೀಸರ ಮೇಲೆಯೂ ದಾಳಿ ನಡೆಸಿದ್ದು, ಈ ಗಲಭೆಯಲ್ಲಿ ಇನ್ಸ್‌ಪೆಕ್ಟರ್ ಸುಭೋದ್ ಕುಮಾರ್ ಸಿಂಗ್ ಎನ್ನುವವರು ಸಾವನ್ನಪ್ಪಿದ್ದರು.

ಪ್ರತಿಭಟನೆ ವೇಳೆ ಜನರನ್ನು ಚದುರಿಸಲು ಪೊಲೀಸರು ಗುಂಡು ಹಾರಿಸಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಸಿಟ್ಟಿಗೆದ್ದ ಗ್ರಾಮಸ್ಥರು ಪೊಲೀಸ್​ ಠಾಣೆಯ ಮೇಲೆ ದಾಳಿ ನಡೆಸಿದ್ದರು. ಈ ವಿಡಿಯೋ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಈ ಗಲಾಟೆಯಲ್ಲಿ ಠಾಣೆಯ ಪೊಲೀಸ್ ಅಧಿಕಾರಿ ಸುಬೋಧ್​ ಸಿಂಗ್​ ಅವರಿಗೆ ಗುಂಡೇಟು ಬಿದ್ದು ಸಾವನ್ನಪ್ಪಿದ್ದರು. ಆದರೆ, ಆ ಗುಂಪಿನಲ್ಲಿ ಗುಂಡು ಹಾರಿಸಿ ಕೊಂದವರು ಯಾರೆಂಬುದು ಕಗ್ಗಂಟಾಗಿತ್ತು.

ಬುಲಂದ್​ಶಹರ್​ ಹಿಂಸಾಚಾರ ಪ್ರಕರಣಕ್ಕೆ ಹೊಸ ತಿರುವು; ಪೊಲೀಸ್​ ಹತ್ಯೆ ಹಿಂದಿದೆಯಾ ಸೈನಿಕನ ಕೈವಾಡ?

ಈ ಸಂಬಂಧ ಬುಲಂದ್​ಶಹರ್​ ಪೊಲೀಸ್​ ಠಾಣೆಯಲ್ಲಿ ಗ್ರಾಮದ 28 ಜನರ ಮತ್ತು 60 ಅಪರಿಚಿತರ ವಿರುದ್ಧ ಎಫ್​ಐಆರ್​ ದಾಖಲಿಸಿಕೊಳ್ಳಲಾಗಿತ್ತು. ಆ ಪಟ್ಟಿಯಲ್ಲಿದ್ದ 8 ಮಂದಿ ವಿಎಚ್​ಪಿ, ಬಜರಂಗದಳ, ಬಿಜೆಪಿ ಯುವ ಘಟಕದಂತಹ ಬಲಪಂಥೀಯ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರಿಂದ ಪ್ರಕರಣ ರಾಜಕೀಯ ತಿರುವು ಕೂಡ ಪಡೆದಿತ್ತು. ಉತ್ತರ ಪ್ರದೇಶ ಪೊಲೀಸರು ಇದುವರೆಗೆ ನಾಲ್ವರನ್ನು ಬಂಧಿಸಿದ್ದಾರೆ.

Comments are closed.