ರಾಷ್ಟ್ರೀಯ

ನಾನು ಪ್ರಧಾನಿಯಾದರೆ ಆಂಧ್ರಪ್ರದೇಶ ವಿಶೇಷ ಸ್ಥಾನಮಾನಕ್ಕೆ ಮೊದಲು ಸಹಿ: ರಾಹುಲ್

Pinterest LinkedIn Tumblr


ಕರ್ನೂಲ್:’ನಾನು ಪ್ರಧಾನಿಯಾದ ಬಳಿಕ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಫೈಲ್‌ಗೆ ಮೊದಲು ಸಹಿ ಹಾಕುತ್ತೇನೆ’ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಆಂಧ್ರದ ಕರ್ನೂಲಿನಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡುತ್ತಿದ್ದ ರಾಹುಲ್, ‘ಮುಂದಿನ ಲೋಕಸಭೆ ಚುನಾವಣೆ ಬಳಿಕ ತಾನು ಪ್ರಧಾನಿಯಾದರೆ ಕಾಂಗ್ರೆಸ್ ಮೊದಲಿಗೆ ಇದೇ ಕೆಲಸವನ್ನು ಮಾಡಲಿದೆ’ ಎಂದು ಭರವಸೆ ನೀಡಿದ್ದಾರೆ.

‘ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವುದು ಕೇಂದ್ರದ ಜವಾಬ್ದಾರಿಯೇ ಹೊರತು ಉಡುಗೊರೆಯಲ್ಲ. ರಾಜ್ಯಗಳನ್ನು ವಿಭಜನೆ ಮಾಡುವ ವೇಳೆ ನೀಡಿರುವ ಭರವಸೆಗಳ ಬಗ್ಗೆ ನನಗೆ ಅರಿವಿದೆ. ಆಂಧ್ರ ಪ್ರದೇಶ ಮರುಸಂಘಟನೆ ಕಾಯ್ದೆಯಲ್ಲಿ ಉಲ್ಲೇಖಿಸಿರುವುದು ಗೊತ್ತಿದೆ. ಆದರೆ, ವಿಶೇಷ ಸ್ಥಾನಮಾನ ನಿರಾಕರಿಸುವ ಮೂಲಕ ಬಿಜೆಪಿ ಜನತೆಗೆ ಮೋಸ ಮಾಡಿದೆ. ಒಂದು ವೇಳೆ, ನಾನು ಪ್ರಧಾನಿಯಾದ ನಂತರ ವಿಶೇಷ ಸ್ಥಾನಮಾನ ನೀಡಲು ಸಾಧ್ಯವಾಗದಿದ್ದರೆ ಮತ್ತೊಮ್ಮೆ ಆಂಧ್ರ ಪ್ರದೇಶಕ್ಕೆ ಕಾಲಿಡುವುದಿಲ್ಲ’ ಎಂದಿದ್ದಾರೆ.

ಇನ್ನು, ಬಿಜೆಪಿ ಹಾಗೂ ಪ್ರಧಾನಿ ಮೋದಿ ದೇಶವನ್ನು ಲೂಟಿ ಮಾಡಲು ಕಾರ್ಪೊರೇಟ್‌ ವಲಯಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಆರೋಪ ಮಾಡಿದರು. ಜತೆಗೆ ರಫೇಲ್ ಯುದ್ಧ ವಿಮಾನ ಡೀಲ್‌ನಲ್ಲಿ ಪ್ರಧಾನಿ ಬೃಹತ್ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಈಗಾಗ್ಲೇ ಹಲವು ಬ್ಯಾಂಕ್‌ಗಳಲ್ಲಿ 45 ಸಾವಿರ ಕೋಟಿ ರೂ. ಲೂಟಿ ಮಾಡಿರುವ ಉದ್ಯಮಿ ಅಲಿಲ್ ಅಂಬಾನಿಗೆ ಲಾಭ ಮಾಡಿಕೊಟ್ಟಿದ್ದಾರೆ. ಇದೇ ರೀತಿ, ಮತ್ತೊಬ್ಬ ವಂಚಕ ವಿಜಯ್ ಮಲ್ಯ ಜತೆ ಹಣಕಾಸು ಸಚಿವ ಅರುಣ್ ಜೇಟ್ಲಿ ಶಾಮೀಲಾಗಿದ್ದಾರೆ. ಲಂಡನ್‌ಗೆ ತೆರಳುವ ಮುನ್ನ ಮಲ್ಯ ಜೇಟ್ಲಿಯನ್ನು ಭೇಟಿ ಮಾಡಿದ್ದರು. ಮಲ್ಯ ಜತೆ ಜೇಟ್ಲಿ ಡೀಲ್ ಮಾಡಿಕೊಂಡಿದ್ದು, ಹೀಗಾಗಿ ವಿದೇಶಕ್ಕೆ ಓಡಿ ಹೋಗಲು ಸಹಾಯ ಮಾಡಿದ್ದಾರೆ’ ಎಂದು ರಾಹುಲ್ ಆರೋಪಿಸಿದ್ದಾರೆ.

ಅಲ್ಲದೆ, ಮಹಿಳೆಯರಿಗೆ ಭದ್ರತೆ ನೀಡಲು ಬಿಜೆಪಿ ಸರಕಾರ ಸಂಪೂರ್ಣ ವಿಫಲವಾಗಿದೆ. ಕೆಳ ಜಾತಿಯ ಜನತೆ ದಿನನಿತ್ಯ ಹಲ್ಲೆಗೊಳಗಾಗುತ್ತಿದ್ದಾರೆ ಎಂದು ಆರೋಪಿಸಿದರು. ಇನ್ನು, ಎಲ್ಲರೂ ಒಗ್ಗಟ್ಟಾಗಿ ನಿಂತು ಸವಾಲುಗಳನ್ನು ಎದುರಿಸಬೇಕಾಗಿರುವ ಭಾರತ ನಮಗೆ ಬೇಕಿದೆ. ಕಾಂಗ್ರೆಸ್ ಪಕ್ಷ ಭಾರತದ ಆತ್ಮವಾಗಿದ್ದು, ನಿಮ್ಮೆಲ್ಲರನ್ನು ಒಳಗೊಂಡಿದೆ ಎಂದು ಅವರು ಹೇಳಿದರು. ಪಕ್ಷದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಆಂಧ್ರ ಪ್ರದೇಶಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ, ಅಲ್ಲಿನ ಮಾಜಿ ಸಿಎಂಗಳಾದ ದಾಮೋದರಂ ಸಂಜೀವಯ್ಯ ಹಾಗೂ ಕೋಟ್ಲಾ ವಿಜಯಭಾಸ್ಕರ ರೆಡ್ಡಿಯ ಕುಟುಂಬದ ಜತೆ ಚರ್ಚೆ ನಡೆಸಿದರು.

Comments are closed.