ನವದೆಹಲಿ: ನಗದು ಅಪಮೌಲ್ಯೀಕರಣದ ನಂತರ ಬ್ಯಾಂಕ್ ವಲಯದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಅನೇಕ ಹೊಸ-ಹೊಸ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ. ಗ್ರಾಹಕರು ಬ್ಯಾಂಕಿನ ನಿಯಮಗಳನ್ನು ಅನುಸರಿಸಲೇಬೇಕಾಗುತ್ತದೆ. ಗೃಹ ಸಚಿವಾಲಯವು ಗ್ರಾಹಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಇದೀಗ ಹೊಸ ನಿಯಮವೊಂದನ್ನು ಜಾರಿಗೆ ತಂದಿದೆ.
ಮೊದಲೆಲ್ಲಾ ಎಟಿಎಂಗಳು ಎನಿ ಟೈಮ್ ಮನಿ ಎಂಬಂತಿದ್ದವು. ಹಣ ಬೇಕೆಂದಾಗ ಮಧ್ಯರಾತ್ರಿ ಬೇಕಾದರೂ ಎಟಿಎಂಗೆ ಹೋಗಿ ಹಣ ತರುತ್ತಿದ್ದರು. ಆದರೆ ರಾತ್ರಿ ವೇಳೆ ಎಟಿಎಂಗಳಲ್ಲಿ ಹಣ ಖಾಲಿಯಾದರೆ ಮತ್ತೆ ಬೆಳಿಗ್ಗೆಯ ವೇಳೆಗೆ ಕಾಯಬೇಕಿದೆ. ಏಕೆಂದರೆ ಖಾಲಿಯಾದ ಎಟಿಎಂಗಳಿಗೆ ನಗರಪ್ರದೇಶಗಳಲ್ಲಿ ರಾತ್ರಿ 9 ಗಂಟೆಯ ನಂತರ, ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಂಜೆ 6 ಗಂಟೆ ನಂತರ ಹಣ ತುಂಬಿಸಲಾಗುವುದಿಲ್ಲ ಎಂದು ಗೃಹ ಸಚಿವಾಲಯ ತಿಳಿಸಿದೆ.
ನಕ್ಸಲ್ ಪೀಡಿತ ಪ್ರದೇಶಗಳಲ್ಲಿರುವ ಎಟಿಎಂಗಳಿಗೆ ಸಂಜೆ 4 ಗಂಟೆಯ ಮುಂಚೆ ಹಣ ತುಂಬಬೇಕಿದೆ. ಈ ಹೊಸ ನಿಯಮ ಮುಂದಿನ ವರ್ಷ ಫೆಬ್ರವರಿಯಿಂದ ಜಾರಿಗೆ ಬರಲಿದೆ.
ನಗದು ವಾಹನಗಳ ಮೇಲೆ ದಾಳಿ, ಎಟಿಎಂ ಮೋಸದ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ. ಎಟಿಎಂಗಳಿಗೆ ಹಣ ತುಂಬಿಸುವ ಖಾಸಗಿ ಏಜೆನ್ಸಿಗಳು ಬ್ಯಾಂಕ್ಗಳಿಂದ ಮಧ್ಯಾಹ್ನದ ವೇಳೆಗೆ ನಗದು ಪಡೆದು ಶಸ್ತ್ರಸಜ್ಜಿತ ವಾಹನಗಳಲ್ಲಿ ಸಾಗಿಸಬೇಕು ಎಂದು ತಿಳಿದು ಬಂದಿದೆ.
Comments are closed.