ರಾಷ್ಟ್ರೀಯ

ಐವರನ್ನು ಮದುವೆಯಾಗಿ ಪಂಗನಾಮ ಹಾಕಿದ್ದ ಚಾಲಾಕಿ ಮಹಿಳೆ!

Pinterest LinkedIn Tumblr


ಅಂಬಾಲಾ: ಐವರನ್ನು ಮದುವೆಯಾಗಿ ಪಂಗನಾಮ ಹಾಕಿದ್ದ ಚಾಲಾಕಿ ಮಹಿಳೆಯೊಬ್ಬಳ ವಿರುದ್ಧ ಆಕೆಯಿಂದ ವಂಚನೆಗೊಳಗಾದ ಐದನೇ ಗಂಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.

ಆರೋಪಿಯನ್ನು ಕರ್ನಾಲ್‌ನ ಶಿವ ಕಾಲೋನಿಯ ನಿವಾಸಿ ಕವಿತಾ ಧಾಮಿಜಾ ಎಂದು ಗುರುತಿಸಲಾಗಿದ್ದು, ಬಿಎಸ್ಎನ್ಎಲ್‌ನಲ್ಲಿ ಅಧಿಕಾರಿಯಾಗಿರುವ ಆಕೆಯ 5ನೇ ಪತಿ ಪುರಾಣ್‌ಚಂದ್ ಸೈನಿ ವಂಚಕ ಪತ್ನಿಯ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.

ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಸೈನಿ ಪತ್ನಿ 2010ರಲ್ಲಿ ಸಾವನ್ನಪ್ಪಿದ್ದಳು. ತನ್ನ ಮಕ್ಕಳಿಬ್ಬರ ಯೋಗಕ್ಷೇಮ ನೋಡಿಕೊಳ್ಳಲು ಮರು ಮದುವೆಯಾಗಬೇಕೆಂದು ಬಯಸಿದ ಸೈನಿ ಪತ್ರಿಕೆಯಲ್ಲಿ ಜಾಹೀರಾತನ್ನು ಪ್ರಕಟಿಸಿದ್ದರು. ಅದನ್ನು ನೋಡಿದ ಕವಿತಾ ತಂದೆ ತಮ್ಮ ಮಗಳ ವಿಷಯ ಪ್ರಸ್ತಾಪಿದ್ದಾರೆ. ಮದುವೆಯಾದ ಕೆಲ ದಿನಗಳ ಬಳಿಕ ಸೈನಿಗೆ ಕವಿತಾ ಈಗಾಗಲೇ ನಾಲ್ಕು ಮದುವೆಯಾಗಿದ್ದು, ನಾಲ್ಕನೇ ಪತಿಯ ಜತೆ ಈಗಲೂ ಸಂಪರ್ಕವನ್ನಿಟ್ಟುಕೊಂಡಿರುವುದು ಬೆಳಕಿಗೆ ಬಂದಿದೆ.

ಒಟ್ಟು ನಾಲ್ಕು ಮದುವೆಯಾಗಿರುವ ಕವಿತಾ ಅವರೆಲ್ಲರಿಗೂ ಪಂಗನಾಮ ಹಾಕಿದ್ದಾಳೆ. ಮೂವರು ಗಂಡಂದಿರಿಂದ ವಿಚ್ಛೇದನ ಪಡೆದಿರುವ ಆಕೆ ಅವರಿಂದ 15 ಲಕ್ಷ ಮತ್ತು ಅಪಾರ ಚಿನ್ನಾಭರಣ ದೋಚಿದ್ದಾಳೆ. ನಾಲ್ಕನೇ ಪತಿ ಓಂ ಪ್ರಕಾಶ್ ಜತೆ ಈಗಲೂ ಸಂಪರ್ಕದಲ್ಲಿದ್ದಾಳೆ. ಆತನಿಂದ ವಿಚ್ಛೇದನ ಪಡೆಯದೆ ನನ್ನನ್ನು ಮದುವೆಯಾಗಿ ಮೋಸ ಮಾಡಿದ್ದಾಳೆ, ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಮೊದಲ ಪತಿ ರಾಧೆ ಶ್ಯಾಮನಿಂದ ಒಂದು ಮಗ ಮತ್ತು ಒಂದು ಮಗಳನ್ನು ಪಡೆದಿದ್ದ ಕವಿತಾ, ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಆತನಿಂದ ದೂರವಾಗಿದ್ದಳು. ವಿಚ್ಛೇದನದ ಬಳಿಕ ಮಗನನ್ನು ಪತಿ ಬಳಿ ಬಿಟ್ಟಿದ್ದ ಆಕೆ ಮಗಳನ್ನು ತನ್ನ ಬಳಿ ಇಟ್ಟುಕೊಂಡಿದ್ದಳು, ಎಂದು ಆಕೆಯ ತಂದೆ ನಮ್ಮ ಮದುವೆ ಸಮಯದಲ್ಲಿ ಹೇಳಿದ್ದರು. ಮದುವೆಯಾದ ಬಳಿಕ ಸ್ವಲ್ಪ ದಿನ ಎಲ್ಲವೂ ಸರಿಯಾಗಿತ್ತು. ಕೆಲ ದಿನಗಳ ಬಳಿಕ ಕವಿತಾ ನನ್ನ ಸಂಬಂಧಿ ಎಂದು ಸುಳ್ಳು ಹೇಳಿ ಓಂ ಪ್ರಕಾಶ್ ( ಮೂರನೇ ಪತಿ)ನನ್ನು ಮನೆಗೆ ಕರೆತರಲು ಆರಂಭಿಸಿದ್ದಾಳೆ. ಬಳಿಕ ಮಗಳನ್ನು ಸಹ ಮನೆಗೆ ಕರೆಸಿಕೊಂಡಿದ್ದಾಳೆ. ಮೊದ ಮೊದಲು ನಾನು ಎಲ್ಲವನ್ನು ಒಪ್ಪಿಕೊಂಡೆ. ಆದರೆ ನೋಡ ನೋಡುತ್ತಿದ್ದಂತೆ ಎಲ್ಲವೂ ಬದಲಾಗತೊಡಗಿತು. ನಾನು ದೌರ್ಜನ್ಯವೆಸಗುತ್ತಿದ್ದೇನೆ ಎಂದು ಪೊಲೀಸರಲ್ಲಿ ಸುಳ್ಳು ದೂರನ್ನು ನೀಡಲಾಯಿತು. ಬಳಿಕ ನನ್ನ ಮನೆಯಿಂದ 3 ಲಕ್ಷ ರೂಪಾಯಿ ಮತ್ತು ಚಿನ್ನಾಭರಣವನ್ನೆತ್ತಿಕೊಂಡು ಆಕೆ ಮನೆ ಬಿಟ್ಟಳು. ಆಕೆಯ ಹಿನ್ನೆಲೆಯನ್ನು ಪರಿಶೀಲಿಸಲಾಗಿ ಈಗಾಗಲೇ ನಾಲ್ಕು ಜನರನ್ನು ಮದುವೆಯಾಗಿ ಮೂವರಿಗೆ ಮೋಸ ಮಾಡಿರುವ ಘೋರ ಸತ್ಯ ತೆರೆದುಕೊಂಡಿತು, ಎಂದು ಸೈನಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ವಂಚಕಿ ಕವಿತಾ ಸದ್ಯ ಕರ್ನಾಲ್‌ನಲ್ಲಿ ವಾಸವಾಗಿದ್ದಾಳೆ ಎಂದು ತಿಳಿದು ಬಂದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Comments are closed.