ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ “ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಅವರಂತೆ ನಾನು ಕೂಡ ಓರ್ವ ರಾಜಕೀಯ ಬಲಿಪಶು” ಎಂದು ಹೇಳಿಕೊಂಡ ಮದ್ಯದ ದೊರೆ ವಿಜಯ್ ಮಲ್ಯಾಗೆ ಖಾರವಾಗಿ ಪ್ರತಿಕ್ರಿಯಿಸಿರುವ ರಾಬರ್ಟ್ ವಾದ್ರಾ, ಬ್ಯಾಂಕ್ ಸಾಲ ಸುಸ್ತಿದಾರನಾಗಿ ದೇಶದಿಂದ ಪಲಾಯನ ಮಾಡಿದವರೊಂದಿಗೆ ನನ್ನ ಹೆಸರು ತಳುಕು ಬೇಡ ಎಂದು ಹೇಳಿದ್ದಾರೆ.
ಭಾರತ ತನ್ನನ್ನು ಗಡಿಪಾರು ಮಾಡಿಸಿಕೊಳ್ಳುವುದರ ವಿರುದ್ಧ ಬ್ರಿಟನ್ ಕೋರ್ಟ್ ನಲ್ಲಿ ತನ್ನನ್ನು ರಕ್ಷಣಾತ್ಮವಾಗಿ ಸಮರ್ಥಿಸಿಕೊಳ್ಳುವ ಸಂದರ್ಭದಲ್ಲಿ ವಿಜಯ್ ಮಲ್ಯಾ, “ಸೋನಿಯಾ ಅಳಿಯ ವಾದ್ರಾ ಮತ್ತು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರಂತೆ ನಾನು ಕೂಡ ಓರ್ವ ರಾಜಕೀಯ ಬಲಿಪಶುವಾಗಿದ್ದೇನೆ’ ಎಂದು ಹೇಳಿದ್ದರು. ಮಲ್ಯಾ ಹೇಳಿಕೆ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆಯೇ ವಿಜಯ್ ಮಲ್ಯ ವಿರುದ್ಧ ಕಿಡಿಕಾರಿರುವ ರಾಬರ್ಟ್ ವಾದ್ರಾ, “ನಾನು ರಾಜಕೀಯ ಬಲಿಪಶು ಇರಬಹುದು.. ಆದರೆ ನಾನೆಂದೂ ನನ್ನ ಸ್ಥಾನಮಾನವನ್ನು ದುರಪಯೋಗ ಪಡಿಸಿಕೊಂಡಿಲ್ಲ ಮತ್ತು ಬೇರೆಯವರ ಹಣವನ್ನು ನುಂಗಿ ಹಾಕಿ ವಿದೇಶಕ್ಕೆ ಪಲಾಯನ ಮಾಡಿಲ್ಲ’ ಎಂದು ತಿರುಗೇಟು ನೀಡಿದ್ದಾರೆ.
ಅಂತೆಯೇ ಈಗ ಮುಚ್ಚಿಹೋಗಿರುವ ಕಿಂಗ್ ಫಿಶರ್ ಏರ್ಲೈನ್ಸ್ ನ ಅಧ್ಯಕ್ಷ ವಿಜಯ್ ಮಲ್ಯಾ ಅವರು ‘ಮರ್ಯಾದೆಯಿಂದ ದೇಶಕ್ಕೆ ಮರಳಿ ಇಲ್ಲಿ ತಮ್ಮ ವಿರುದ್ಧ ಬಾಕಿ ಇರುವ ಕಾನೂನು ಪ್ರಕರಣಗಳನ್ನು ಎದುರಿಸಬೇಕು’ ಎಂದು ವಾದ್ರಾ ಮಲ್ಯಾಗೆ ತಿರುಗೇಟು ನೀಡಿದ್ದಾರೆ.
ವಿವಿಧ ಬ್ಯಾಂಕ್ ಗಳಿಂದ ಸುಮಾರು 9 ಸಾವಿರ ಕೋಟಿ ರು.ಸಾಲಮಾಡಿ ಅದನ್ನು ಪಾವತಿ ಮಾಡದೇ ವಿದೇಶಕ್ಕೆ ಲಂಡನ್ ನಲ್ಲಿ ಆಶ್ರಯ ಪಡೆದಿರುವ ವಿಜಯ್ ಮಲ್ಯಾ ವಿರುದ್ಧದ ಪ್ರಕರಣದ ವಿಚಾರಣೆ ಬ್ರಿಟನ್ ಕೋರ್ಟ್ ನಲ್ಲಿ ಡಿಸೆಂಬರ್ 4ರಂದು ನಡೆಯಲಿದೆ.
Comments are closed.