ಚೆನ್ನೈ(ಡಿ. 12): ವಾರ್ದಾ ಚಂಡಮಾರುತ ಚೆನ್ನೈಗೆ ಅಪ್ಪಳಿಸಿದೆ. ಗಂಟೆಗೆ 150 ಕಿಮೀ ವೇಗದಲ್ಲಿ ಚಲಿಸುತ್ತಿರುವ ಚಂಡಮಾರುತ ತಮಿಳುನಾಡಿನ ಕರಾವಳಿ ಭಾಗದಲ್ಲಿ ರೌದ್ರಾವತಾರ ತಾಳಿದೆ. ಚೆನ್ನೈ, ತಿರುವಳ್ಳೂರ್ ಮತ್ತು ಕಾಂಚೀಪುರಂನಲ್ಲಿ ಇಂದು ಸೋಮಮಾರ ಬೆಳಗ್ಗೆಯಿಂದಲೇ ಭಾರೀ ಮಳೆಯಾಗುತ್ತಿದೆ. ಗಾಳಿಯ ರಭಸಕ್ಕೆ ಅನೇಕ ಮರಗಳು ಧರೆಗುರುಳಿವೆ. ಹಲವು ಮನೆಗಳ ಮೇಲ್ಛಾವಣಿ ಹಾರಿಹೋಗಿವೆ. ಚೆನ್ನೈನ ಸಾಕಷ್ಟು ಪ್ರದೇಶಗಳಲ್ಲಿ ಮನೆಗಳು ಜಲಾವೃತಗೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಭೂಕುಸಿತ ಸಂಭವಿಸುವ ಅಪಾಯವಿದೆ ಎಂದು ಎಚ್ಚರಿಸಲಾಗಿದೆ. ಆಂಧ್ರದಿಂದ ಚೆನ್ನೈಗೆ ಓಡಾಡುವ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿದೆ.
ರಕ್ಷಣಾ ಕಾರ್ಯಕ್ಕಾಗಿ ಎನ್’ಡಿಆರ್’ಎಫ್’ನ 15 ತಂಡಗಳನ್ನು ತಮಿಳುನಾಡು ಹಾಗು ಆಂಧ್ರದ ಕರಾವಳಿ ಭಾಗಗಳಿಗೆ ಈಗಾಗಲೇ ನಿಯೋಜಿಸಲಾಗಿದೆ. ಪ್ರತೀ ತಂಡದಲ್ಲೂ 45 ಸಿಬ್ಬಂದಿ ಇದ್ದು, ತೀವ್ರತರವಾದ ನೈಸರ್ಗಿಕ ವಿಪತ್ತುಗಳನ್ನು ಎದುರಿಸುವ ತರಬೇತಿಯನ್ನು ಹೊಂದಿದವರಾಗಿದ್ದಾರೆ. ಅಗತ್ಯಬಿದ್ದರೆ ಎನ್’ಡಿಆರ್’ಎಫ್ ಜೊತೆಗೆ ಸೇನಾ ಸಿಬ್ಬಂದಿಯನ್ನೂ ನಿಯೋಜಿಸಲು ಅಣಿಗೊಳಿಸಲಾಗಿದೆ.
ಇದೇ ವೇಳೆ, ತಮಿಳುನಾಡು ಸರಕಾರ ಕರಾವಳಿ ಭಾಗದ ಜನರಿಗೆ ಸಹಾಯವಾಣಿ ನಂಬರ್ ನೀಡಿದೆ.
044-25619206, 25619511, 25384965, 25383694, 25383694, 25367823, 25387570.
ಕರ್ನಾಟಕಕ್ಕೂ ಎಫೆಕ್ಟ್:
ಇದೇ ವೇಳೆ, ಕರ್ನಾಟಕದ ಮೇಲೂ ಚಂಡಮಾರುತದ ಪರಿಣಾಮ ವ್ಯಕ್ತವಾಗಲಿದೆ. ಬೆಂಗಳೂರು, ಕೋಲಾರ ಮತ್ತು ಕೆಜಿಎಫ್ ಭಾಗಗಳಲ್ಲಿ ಡಿ. 13 ಮತ್ತು 14ರಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಷ್ಟ್ರೀಯ
Comments are closed.