ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ದೂರವಾಣಿ ಮೂಲಕ ಉತ್ತರ ಪ್ರದೇಶದ ಬಹರೈಚ್ ನಲ್ಲಿ ನಡೆಯುತ್ತಿರುವ ಪರಿವರ್ತನ್ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದು, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಗೂಂಡಾ ರಾಜ್ ಅಂತ್ಯವಾಗಲಿದೆ ಎಂದು ಹೇಳಿದ್ದಾರೆ,
ಪ್ರಧಾನಿ ಮೊದಿ ಅವರು ಇಂದು ಬಹರೈಚ್ ಗೆ ಆಗಮಿಸಿ ಬಿಜೆಪಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಬೇಕಿತ್ತು. ಆದರೆ ದಟ್ಟ ಮಂಜಿನಿಂದಾಗಿ ಅವರ ಹೆಲಿಕಾಪ್ಟರ್ ಬಹರೈಚ್ ನಲ್ಲಿ ಲ್ಯಾಂಡ್ ಆಗಲು ಸಾಧ್ಯವಾಗಲಿಲ್ಲ. ಹೀಗಾಗಿ ರ್ಯಾಲಿಯನ್ನು ರದ್ದುಗೊಳಿಸುವ ಬದಲು ದೂರವಾಣಿ ಮೂಲಕವೇ ಪರಿವರ್ತನ್ ರ್ಯಾಲಿ ಉದ್ದೇಶಿಸಿ ಮಾತನಾಡಿದರು.
ಇಂದು ರಾಜ್ಯದಲ್ಲಿ ಗೂಂಡಾ ರಾಜ್ ಇದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದ್ದು, ಇದರಿಂದ ಜನ ಬೇಸತ್ತುಹೋಗಿದ್ದಾರೆ. ಪೊಲೀಸರಿಂದಲೂ ಈ ಗೂಂಡಾಗಳನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಇದರಿಂದ ನೀವು ಮುಕ್ತಿ ಪಡೆಯಬೇಕಾದರೆ ಗೂಂಡಾಗಳನ್ನು ಬೆಂಬಲಿಸುತ್ತಿರುವವರನ್ನು ತಿರಸ್ಕರಿಸಿ, ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸಿ ಎಂದು ಕರೆ ನೀಡಿದರು.
ಉತ್ತರ ಪ್ರದೇಶದ ಆಡಳಿತರೂಢ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷಗಳು ಕೇಂದ್ರ ಸರ್ಕಾರದ ಕಪ್ಪು ಹಣದ ವಿರುದ್ಧದ ಹೋರಾಟವನ್ನು ವಿರೋಧಿಸುತ್ತಿರುವುದು ಏಕೆ ಎಂಬುದು ನನಗೆ ಅರ್ಥವಾಗುತ್ತಿಲ್ಲ ಎಂದು ಪ್ರಧಾನಿ ಹೇಳಿದರು.
ಇದೇ ವೇಳೆ ನೋಟ್ ನಿಷೇಧ ವಿಚಾರ ಮುಂದಿಟ್ಟುಕೊಂಡು ಸಂಸತ್ ಕಲಾಪಕ್ಕೆ ಅಡ್ಡಿಪಡಿಸುತ್ತಿರುವ ಪ್ರತಿಪಕ್ಷಗಳ ವಿರುದ್ಧವೂ ವಾಗ್ದಾಳಿ ನಡೆಸಿದ ಮೋದಿ, ನೋಟ್ ನಿಷೇಧದ ಬಗ್ಗೆ ನಾನು ಚರ್ಚೆಗೆ ಸಿದ್ಧರಿದ್ದೇವೆ. ಆದರೆ ಮತದಾರರಿಂದ ತಿರಸ್ಕೃತಗೊಂಡವರು ಕಳೆದ 20 ದಿನಗಳಿಂದ ನಮ್ಮ ಅಭಿಪ್ರಾಯ ಮಂಡಿಸಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದರು.