ನವದೆಹಲಿ: ಟಾಟಾ ಸನ್ಸ್ ಕಂಪನಿ ಅಧ್ಯಕ್ಷ ಹುದ್ದೆಯಿಂದ ವಜಾಗೊಂಡಿರುವ ಸೈರಸ್ ಮಿಸ್ತ್ರಿ ಕಾಲಾವಧಿಯಲ್ಲಿ ಟಾಟಾ ಸಮೂಹ ಸಂಸ್ಥೆ ನಷ್ಟ ಅನುಭವಿಸಿದೆ ಎಂಬ ಆರೋಪಕ್ಕೆ ಉತ್ತರ ನೀಡಲು ಮಿಸ್ತ್ರಿ ಮುಂದೆ ಬಂದಿದ್ದಾರೆ.
ತನ್ನ ಕಾಲಾವಧಿಯಲ್ಲಿ ಕಂಪನಿಯ ಖರ್ಚು ವೆಚ್ಚಗಳು ಯಾವ ರೀತಿ ಇದ್ದವು ಎಂಬುದರ ಲೆಕ್ಕ ಹೇಳಿದ ಮಿಸ್ತ್ರಿ ನೀರಾ ರಾಡಿಯಾ ಪ್ರಕರಣವನ್ನು ಉಲ್ಲೇಖಿಸುವ ಮೂಲಕ ಟಾಟಾ ಕಂಪನಿ ವಿರುದ್ದ ಗುಡುಗಿದ್ದಾರೆ.
ಟಾಟಾ ಸನ್ಸ್, ರತನ್ ಟಾಟಾ ಅವರ ಕಚೇರಿಯ ಎಲ್ಲ ಖರ್ಚುಗಳನ್ನು ನಿಭಾಯಿಸುತ್ತಿದ್ದು, ಇದರಲ್ಲಿ ಮಹತ್ತರವಾದ ಒಂದಷ್ಟು ಮೊತ್ತ ಕಾರ್ಪರೇಟ್ ಜೆಟ್ಗಳಿಗಾಗಿ ಬಳಸಲಾಗುತ್ತಿತ್ತು.
2ಜಿ ತರಂಗಾಂತರ ವಿತರಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಲಾಬಿಗಾರ್ತಿ ನೀರಾ ರಾಡಿಯಾ ಅವರಿಗೆ ಟಾಟಾ ಸನ್ಸ್ ₹40 ಕೋಟಿ ಪಾವತಿ ಮಾಡುತ್ತಿತ್ತು. ರಾಡಿಯಾ ಫೋನ್ ಕದ್ದಾಲಿಕೆ ಪ್ರಕರಣ ಬೆಳಕಿಗೆ ಬಂದ ನಂತರ ರಾಡಿಯಾ ತನ್ನ ವೈಷ್ಣವಿ ಕಾರ್ಪೊರೇಟ್ ಕಮ್ಯುನಿಕೇಶನ್ಸ್ ಸಂಸ್ಥೆಯನ್ನು ಸ್ಥಗಿತಗೊಳಿಸಿದ್ದರು.
ಟಾಟಾ ಮತ್ತು ರಿಲಯನ್ಸ್ ಕಂಪನಿಗಳಿಗೆ ಸಾರ್ವಜನಿಕ ಸಂಪರ್ಕ ಸೇವೆ ಒದಗಿಸುತ್ತಿದ್ದ ನೀರಾ ರಾಡಿಯಾ ವ್ಯವಹಾರ ಸ್ಥಗಿತಗೊಳಿಸಿದ ನಂತರ ಟಾಟಾ ಕಂಪನಿ ಅರುಣ್ ನಂದಾ ಒಡೆತನದ ರೆಡಿಫ್ಯೂಶಿಯನ್ ಸಂಸ್ಥೆಯೊಂದಿಗೆ ತನ್ನ ಸಾರ್ವಜನಿಕ ಸಂಪರ್ಕ ಸೇವೆಯ ಒಪ್ಪಂದ ಆರಂಭಿಸಿತ್ತು. ರೆಡಿಫ್ಯೂಶಿಯನ್ ಸಂಸ್ಥೆಗೆ ಟಾಟಾ ಕಂಪನಿ ವರ್ಷಕ್ಕೆ ₹60 ಕೋಟಿ ಪಾವತಿ ಮಾಡುತ್ತಿತ್ತು. ಇದೆಲ್ಲವೂ ಮಿಸ್ತ್ರಿ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವ ಮುಂಚೆ ನಡೆದಿತ್ತು ಎಂದು ಮಿಸ್ತ್ರಿಯವರ ಕಚೇರಿ ಹೇಳಿದೆ.
Comments are closed.