ನವದೆಹಲಿ(ಪಿಟಿಐ): ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಸಲ್ಲಿಸಿದ್ದ ಸಿವಿಲ್ ಮಾನನಷ್ಟ ದೂರು ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಇತರ ಐವರಿಗೆ ದೆಹಲಿ ಹೈಕೋರ್ಟ್ ಗುರುವಾರ ಜಾಮೀನು ನೀಡಿದೆ.
ಮುಖ್ಯ ಮೆಟ್ರೊಪಾಲಿಟನ್ ನ್ಯಾಯಾಧೀಶ ಸುಮಿತ್ ದಾಸ್ ಅವರು, ಕೇಜ್ರಿವಾಲ್, ಎಎಪಿ ಮುಖಂಡರಾದ ಅಶುತೋಷ್, ಸಂಜಯ್ ಸಿಂಗ್, ಕುಮಾರ್ ವಿಶ್ವಾಸ್, ರಾಘವ್ ಛಡ್ಡಾ ಮತ್ತು ದೀಪಕ್ ವಾಜಪೇಯಿ ಅವರಿಗೆ ತಲಾ ₹ 20 ಸಾವಿರ ಮೊತ್ತದ ಬಾಂಡ್ ಪಡೆದು ಜಾಮೀನು ನೀಡಿದರು.
ನ್ಯಾಯಾಲಯ ಮೇ 19ಕ್ಕೆ ಪ್ರಕರಣದ ವಿಚಾರಣೆಯನ್ನು ಮುಂದೂಡಿದೆ.
ಕೇಜ್ರಿವಾಲ್ ಮತ್ತು ಇತರ ಐವರ ವಿರುದ್ಧ ಅರುಣ್ ಜೇಟ್ಲಿ ಅವರು ದೆಹಲಿ ಹೈಕೋರ್ಟ್ನಲ್ಲಿ ಸಿವಿಲ್ ಮಾನನಷ್ಟ ದೂರು ದಾಖಲಿಸಿದ್ದರು. ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಯಲ್ಲಿ (ಡಿಸಿಸಿಎ) ಅಕ್ರಮ ನಡೆದಿದೆ ಎಂದು ಆರೋಪಿಸಿ ತಮ್ಮ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ಇವರು ನೀಡಿದ್ದಾರೆ ಎಂದು ದೂರಿನಲ್ಲಿ ಜೇಟ್ಲಿ ಹೇಳಿದ್ದರು. ₹ 10 ಕೋಟಿ ಪರಿಹಾರ ನೀಡಬೇಕು ಎಂದು ದೂರಿನಲ್ಲಿ ಹೇಳಿದ್ದರು.
ಈ ಆರೂ ಜನರ ವಿರುದ್ಧ ಪಟಿಯಾಲ ನ್ಯಾಯಾಲಯದಲ್ಲಿಯೂ ಜೇಟ್ಲಿ ಅವರು ಕ್ರಿಮಿನಲ್ ಮಾನಹಾನಿ ದೂರು ದಾಖಲಿಸಿದ್ದಾರೆ.
ರಾಷ್ಟ್ರೀಯ