ಜೀವನದಲ್ಲಿ ದೊಡ್ಡ ಕನಸುಗಳನ್ನಿಟ್ಟುಕೊಂಡಿದ್ದ ಪ್ರತ್ಯೂಷ ಬಾಯ್ ಫ್ರೆಂಡ್ ಬಗ್ಗೆ ತಲೆಕೆಡಿಸಿಕೊಂಡಿದ್ದಳು: ರಾಖಿ ಸಾವಂತ್
ಮುಂಬೈ: ಬಾಯ್ ಫ್ರೆಂಡ್ ರಾಹುಲ್ ರಾಜ್ ಸಿಂಗ್ ಜೊತೆಗಿನ ಪ್ರೀತಿ ಬಗ್ಗೆ ಪ್ರತ್ಯೂಷ ತಲೆಕೆಡಿಸಿಕೊಂಡಿದ್ದಳು ಎಂದು ಬಾಲಿವುಡ್ ನಟಿ ಹಾಗೂ ಪ್ರತ್ಯೂಷ ಆತ್ಮೀಯ ಗೆಳತಿಯಾಗಿದ್ದ ರಾಖಿ ಸಾವಂತ್ ಅವರು ಶನಿವಾರ ಹೇಳಿದ್ದಾರೆ.
ಪ್ರತ್ಯೂಷ ಆತ್ಮಹತ್ಯೆ ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಅವರು, ಪ್ರತ್ಯೂಷ ಸಾವನ್ನಪ್ಪಿದ್ದಾಳೆಂದು ಈಗಲೂ ನಂಬಲು ಸಾಧ್ಯವಾಗುತ್ತಿಲ್ಲ. ಪ್ರತ್ಯೂಷ ತನ್ನ ಜೀವನದಲ್ಲಿ ಉತ್ಸಾಹಭರಿತಳಾಗಿದ್ದಳು. ಬಹಳ ದೊಡ್ಡ ದೊಡ್ಡ ಕನಸುಗಳನ್ನಿಟ್ಟುಕೊಂಡಿದ್ದಳು. ಕೆಲವು ದಿನಗಳ ಹಿಂದಷ್ಟೇ ಆಕೆಯನ್ನು ಭೇಟಿಯಾಗಿದ್ದೆ ಎಂದು ಹೇಳಿದ್ದಾರೆ.
ಭೇಟಿ ಸಂದರ್ಭದಲ್ಲಿ ಪ್ರತ್ಯೂಷ ತನ್ನ ಗೆಳೆಯ ರಾಹುಲ್ ಮಾಜಿ ಗೆಳತಿ ಸಲೋನಿ ಬಗ್ಗೆ ತಲೆಕೆಡಿಸಿಕೊಂಡಿರುವುದು ಗೊತ್ತಾಗಿತ್ತು. ಪ್ರತ್ಯೂಷ ತುಂಬಾ ಭಾವನಾತ್ಮಕ ಹುಡುಗಿಯಾಗಿದ್ದಳು. ಆಕೆಯ ದುಃಖದ ಬಗ್ಗೆ ಪ್ರಶ್ನೆ ಕೇಳುತ್ತಿದ್ದಂತೆ ಕಣ್ಣಿನಲ್ಲಿ ನೀರು ಬರುತ್ತಿತ್ತು.
ಪ್ರತ್ಯೂಷ ಎಂದಿಗೂ ತನ್ನ ಕೆಲಸದ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಆಕೆ ತಲೆಕೆಡಿಸಿಕೊಳ್ಳಲು ಕಾರಣವಾಗಿದ್ದು ಆಕೆಯ ಹುಚ್ಚು ಪ್ರೀತಿ. ರಾಹುಲ್ ನನ್ನು ಬಹಳ ಪ್ರೀತಿಸುತ್ತಿದ್ದಳು. ರಾಹುಲ್ ಬಿಟ್ಟು ಇರುತ್ತಿರಲಿಲ್ಲ. ಪ್ರಕರಣವನ್ನು ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸತ್ಯಾಂಶ ಹೊರಬೀಳಲಿದೆ ಎಂದು ಹೇಳಿದ್ದಾರೆ.
‘ಬಾಲಿಕಾ ವಧು’ ಧಾರಾವಾಹಿಯ ಮೂಲಕ ಖ್ಯಾತಿ ಗಳಿಸಿದ್ದ ನಟಿ ಪ್ರತ್ಯೂಷ ಅವರು ನಿನ್ನೆಯಷ್ಟೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಪ್ರತ್ಯೂಷ ಸಾವಿಗೆ ಇಡೀ ಕಿರುತೆರೆ ಕಲಾವಿದರು ಕಂಬನಿ ಮಿಡಿದಿದ್ದಾರೆ.