ಅಮೇಠಿ: ಆಕರ್ಷಣೀಯ ವ್ಯಕ್ತಿತ್ವ ಹಾಗೂ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪಡಿಯಚ್ಚಿನಂತಿರುವ ಪ್ರಿಯಾಂಕ ಗಾಂಧಿ ಸಕ್ರಿಯ ರಾಜಕಾರಣಕ್ಕೆ ಇಳಿಯಲು ಸಿದ್ಧರಾಗಿದ್ದು, ಉತ್ತರ ಪ್ರದೇಶದ ಮುಂಬರುವ ವಿಧಾನಭಾ ಚುನಾವಣೆಯಲ್ಲಿ ಇದು ಕಾಂಗ್ರೆಸ್ ಪಕ್ಷಕ್ಕೆ ಹೊಸ ಚೈತನ್ಯ, ಆನೆ ಬಲ ತಂದುಕೊಡಲಿದೆ.
ಪ್ರಿಯಾಂಕಾ ಗಾಂಧಿಯನ್ನು ಸಕ್ರಿಯ ಚುನಾವಣಾ ಪ್ರಚಾರಕ್ಕೆ ಇಳಿಸುವ ಸಂಬಂಧ ಈಗಾಗಲೇ ಕಾಂಗ್ರೆಸ್ ವಲಯದೊಳಗೆ ಮಹತ್ವದ ಚರ್ಚೆ ನಡೆದಿದ್ದು, ಬಹುತೇಕ ಮುಖಂಡರು ಪ್ರಿಯಾಂಕ ಗಾಂಧಿಯನ್ನು ರಾಜಕಾರಣಕ್ಕೆ ತಂದು ಹೊಸ ಜವಾಬ್ದಾರಿ ನೀಡಿದರೆ ಪಕ್ಷಕ್ಕೆ ಒಳ್ಳೆಯದಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
. ಪ್ರಿಯಾಂಕ ಅವರನ್ನು ಪ್ರಚಾರಕ್ಕೆ ಇಳಿಸುವುದು ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್ ಅವರ ರಾಜಕೀಯ ತಂತ್ರಗಾರಿಕೆಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಅಮೇಠಿಯ ಸಹಿತ ಅನೇಕ ಕಡೆಗಳ ಕಾಂಗ್ರೆಸಿಗರು ಪ್ರಿಯಾಂಕಾ ರಾಜಕೀಯಕ್ಕೆ ಬರಬೇಕೆಂಬ ಬೇಡಿಕೆಯನ್ನು ಇಡುತ್ತಾ ಬಂದಿದ್ದಾರೆ. ಇದೀಗ ಅಲ್ಲಿನ ಕಾಂಗ್ರೆಸ್ಸಿಗರ ಆಸೆ ನಿಜವಾಗುವ ನಿಟ್ಟಿನಲ್ಲಿದೆ. ಹೈಕಮಾಂಡ್ ಮೂಲಗಳ ಪ್ರಕಾರ ಉತ್ತರಪ್ರದೇಶದಲ್ಲಿ ಬಿಎಸ್ಪಿ ಮುಖಂಡೆ ಮಾಯವತಿ. ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಮತ್ತು ಮುಖ್ಯಮಂತ್ರಿ ಅಖಿಲೇಶ್ ಅವರ ರಾಜಕೀಯ ಹೋರಾಟಕ್ಕೆ ತಕ್ಕ ಉತ್ತರ ಪ್ರಿಯಾಂಕರ ಮೂಲಕ ನೀಡಲಾಗುವುದು. ಆದರೆ ಸಮಾಜವಾದಿ ಪಕ್ಷ ಅಮೇಠಿ ಸಹಿತ ೧೪೧ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿಬಿಟ್ಟಿದೆ.
ಕಾಂಗ್ರೆಸ್ ತನ್ನ ಚುನಾವಣಾ ತಂತ್ರಗಳನ್ನು ತಿಳಿಸುವುದರಲ್ಲೇ ಸಮಯ ಕಳೆಯುತ್ತಿದೆ. ಪ್ರಿಯಾಂಕ ಇತ್ತೀಚೆಗೆ ದಿಲ್ಲಿಯಲ್ಲಿ ಪಕ್ಷದ ಬ್ಲಾಕ್ ನಾಯಕರನ್ನು ಭೇಟಿಯಾಗಿ ಮನೆಮನೆಗೆ ಹೋಗಿ ಮತದಾರರನ್ನು ಭೇಟಿಯಾಗಲು ಸೂಚಿಸಿದರೆಂದು ಹೈಕಮಾಂಡ್ ಮೂಲಗಳು ತಿಳಿಸಿವೆ. ಪ್ರಿಯಾಂಕಾ ಚುನಾವಣಾ ನೇತೃತ್ವಕ್ಕಿಳಿದರೆ ಕಾಂಗ್ರೆಸ್ ಪುನಶ್ಚೇತನಗೊಳ್ಳಲಿದೆ ಎಂಬ ನಂಬಿಕೆ ಪಕ್ಷೀಯರಲ್ಲಿ ಬಲವಾಗಿರುವುದು ಗೋಚರಿಸುತ್ತಿದೆ ಎಂದು ವರದಿಗಳು ತಿಳಿಸಿವೆ. ಅಭ್ಯರ್ಥಿಗಳ ಆಯ್ಕೆಯಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ಅಮೇಠಿ ರಾಯಬರೇಲಿ ಸಹಿತ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ನ್ನು ಬಲಪಡಿಸಲು ನೆರವಾಗಲಿದ್ದಾರೆಂಬ ಭರವಸೆ ಕಾಂಗ್ರೆಸಿಗರಲ್ಲಿದೆ.