ನವದೆಹಲಿ: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಸಂಸತ್ತಿನ ಮುಂಗಡಪತ್ರ ಅಧಿವೇಶನವನ್ನು ಅಧಿಕೃತವಾಗಿ ಸಮಾಪ್ತಿಗೊಳಿಸಿ ರಾಜ್ಯಸಭಾ ಕಲಾಪಗಳನ್ನು ಕೂಡಾ ಮುಂದಕ್ಕೆ ಹಾಕಿದ್ದಾರೆ ಎಂದು ಮೇಲ್ಮನೆಯ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ಈ ಕ್ರಮದ ಪರಿಣಾಮವಾಗಿ ಕೇಂದ್ರ ಸರ್ಕಾರವು ಈಗ ಭಾನುವಾರ ರಾಷ್ಟ್ರಪತಿ ಆಳ್ವಿಕೆಗೆ ಒಳಪಟ್ಟಿರುವ ಉತ್ತರಾಖಂಡ ಸರ್ಕಾರಕ್ಕೆ ವೆಚ್ಚವನ್ನು ಕೇಂದ್ರ ಸರ್ಕಾರದ ನಿಧಿಯಿಂದ ವಿನಿಯೋಗಿಸಲು ಅನುಕೂಲವಾಗುವಂತೆ ಸುಗ್ರೀವಾಜ್ಞೆಯನ್ನು ಹೊರಡಿಸಬಹುದಾಗಿದೆ. ಸಂಸತ್ ಅಧಿವೇಶನ ನಡೆಸುತ್ತಿರುವಾಗ ಈ ರೀತಿ ಸುಗ್ರೀವಾಜ್ಞೆ ಒದಗಿಸಲು ಕಾನೂನಿನಲ್ಲಿ ಅವಕಾಶ ಇಲ್ಲ.
ರಾಜ್ಯಸಭಾ ಅಧಿವೇಶನವನ್ನು ಬುಧವಾರ ರಾತ್ರಿ ಸಮಾಪ್ತಿಗೊಳಿಸಲಾಗಿದೆ ಎಂದು ಮೇಲ್ಮನೆ ಸಚಿವಾಲಯದ ಅಧಿಕಾರಿ ತಿಳಿಸಿದರು. ಲೋಕಸಭೆಯ ಅಧಿವೇಶನವನ್ನು ಮಂಗಳವಾರ ಸಮಾಪ್ತಿಗೊಳಿಸಲಾಗಿತ್ತು.