ನವದೆಹಲಿ: ಭಾರತೀಯ ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟ್ಟರ್ ಖಾತೆಯಿಂದ (@ಐ ಎನ್ ಸಿ ಇಂಡಿಯಾ) ಬರೆಯಲಾಗಿರುವ ಟ್ವೀಟ್ ನಲ್ಲಿ ಬಲಪಂಥೀಯ ನಾಯಕ ದಿವಂಗತ ವಿ ಡಿ ಸಾವರ್ಕರ್ ಅವರನ್ನು ದೇಶದ್ರೋಹಿ ಎಂದಿದೆ.
ಭಗತ್ ಸಿಂಗ್ ಮತ್ತು ಸಾವರ್ಕರ್ ಫೋಟೋಗಳನ್ನು ಅಕ್ಕಪಕ್ಕದಲ್ಲಿರಿಸಿ, ಹುತಾತ್ಮರು ಮತ್ತು ದೇಶದ್ರೋಹಿಗಳು ಎಂದು ಬರೆಯಲಾಗಿದೆ. ಅಲ್ಲದೆ ಸಾವರ್ಕರ್ ಮತ್ತು ಭಗತ್ ಸಿಂಗ್ ಜೈಲಿನಿಂದ ಬ್ರಿಟಿಶ್ ಅಧಿಕಾರಿಗಳಿಗೆ ಬರೆದ ಕೊನೆಯ ಅರ್ಜಿಯ ಭಾಗಗಳನ್ನು ಪ್ರಕಟಿಸಲಾಗಿದೆ.
೧೯೩೧ರಲ್ಲಿ ಲಾಹೋರ್ ಜೈಲಿನಿಂದ ಭಗತ್ ಸಿಂಗ್ ಅಂದಿನ ಬ್ರಿಟಿಷ್ ಸರ್ಕಾರಕ್ಕೆ ಬರೆದ ಅರ್ಜಿಯಲ್ಲಿ “ಬ್ರಿಟಿಷ್ ರಾಜ್ಯ ಮತ್ತು ಭಾರತ ರಾಜ್ಯದ ನಡುವೆ ಯುದ್ಧ ಇದೆ ನಾವು ಈ ಯುದ್ಧದಲ್ಲಿ ಪಾಲ್ಗೊಂಡಿದ್ದೇವೆ ಆದುದರಿಂದ ನಾವು ಯುದ್ಧ ಖೈದಿಗಳು” ಎಂದಿದ್ದಾರೆ.
೧೯೧೩ರಲ್ಲಿ ಅಂಡಮಾನ್ ನ ಸೆಲ್ಯುಲಾರ್ ಜೈಲಿನಿಂದ ಸಾವರ್ಕರ್ ಬರೆದಿರುವ ಪತ್ರದಲ್ಲಿ “ಆದುದರಿಂದ ಸರ್ಕಾರ ದಯೆ ತೋರಿ ನನ್ನನ್ನು ಬಿಡುಗಡೆ ಮಾಡುವುದಾದರೆ, ನಾನು ಇಂಗ್ಲಿಶ್ ಸರ್ಕಾರಕ್ಕೆ ನಿಯತ್ತಿನಿಂದ ಇರುತ್ತೇನೆ” ಎಂದು ಬರೆದಿದ್ದಾರೆ.
ಬ್ರಿಟಿಷರು ಮಾರ್ಚ್ ೨೩, ೧೯೩೧ ರಲ್ಲಿ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರನ್ನು ಗಲ್ಲಿಗೇರಿಸಿದ ದುರಂತ ನೆನಪಿನಲ್ಲಿ ಹುತಾತ್ಮರ ದಿನಾಚರಣೆಯ ಅಂಗವಾಗಿ ಈ ಟ್ವೀಟ್ ಮಾಡಲಾಗಿದೆ.