ನವದೆಹಲಿ: ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಅವರ ಸಾಲ ಈಗ ಹೊಸ ತಿರುವು ಪಡೆದುಕೊಂಡಿದ್ದು, ಐಡಿಬಿಐ ಬ್ಯಾಂಕ್ ಮದ್ಯದ ದೊರೆಗೆ ಕೇವಲ 20 ದಿನಗಳಲ್ಲೇ ಸಾಲ ಮಂಜೂರು ಮಾಡಿರುವ ಮಾಹಿತಿ ಹೊರಬಿದ್ದಿದೆ. ಅಲ್ಲದೆ ಇದರ ಹಿಂದೆ ರಾಜಕೀಯ ಲಾಬಿ ಇದೆ ಎನ್ನಲಾಗುತ್ತಿದೆ.
ಇತ್ತಿಚೀಗಷ್ಟೆ ಐಡಿಬಿಐ ಹಿರಿಯ ಅಧಿಕಾರಿಗಳನ್ನು ಜಾರಿ ನಿರ್ದೇಶನಾಲಯ ವಿಚಾರಣೆಗೆ ಒಳಪಡಿಸಿದ್ದು, ವಿಚಾರಣೆ ವೇಳೆ ವಿಜಯ್ ಮಲ್ಯಗೆ ಸಾಲ ಮಂಜೂರು ಮಾಡಿಸಲು ರಾಜಕೀಯ ಲಾಬಿ ನಡೆದಿರುವ ಮಾಹಿತಿ ಲಭ್ಯವಾಗಿದೆ ಎಂದು ದಿನಪತ್ರಿಕೆಯೊಂದು ವರದಿ ಮಾಡಿದೆ.
ಎಕನಾಮಿಕ್ಸ್ ಟೈಮ್ಸ್ ವರದಿಯ ಪ್ರಕಾರ, ಹಣ ದುರ್ಬಳಕೆ ಪ್ರಕರಣ ಸಂಬಂಧ ಇತ್ತಿಚೀಗೆ ಐಡಿಬಿಐ ಹಿರಿಯ ಅಧಿಕಾರಿಯ ವಿಚಾರಣೆ ವೇಳೆ, 900 ಕೋಟಿ ಸಾಲದ ಹಿಂದೆ ರಾಜಕೀಯ ಕೈವಾಡ ಇರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ವಿಜಯ್ ಮಲ್ಯ ಅವರು ಸಾಲಕ್ಕಾಗಿ ಅರ್ಜಿ ಸಲ್ಲಿಸಿದ ಕೇವಲ 20 ದಿನಗಳಲ್ಲೇ ಐಡಿಬಿಐ ಬ್ಯಾಂಕ್, ನಷ್ಟದಲ್ಲಿರುವ ಕಂಪನಿಗೆ 900 ಕೋಟಿ ರುಪಾಯಿ ಸಾಲ ಮಂಜೂರು ಮಾಡಿದೆ.
ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇತ್ತೀಚಿಗೆ ಐಡಿಬಿಐ ಮಾಜಿ ಸಿಎಂಡಿ ಯೋಗೇಶ್ ಅಗರವಾಲ್ ಹಾಗೂ ಇತರೆ ಇಬ್ಬರು ಅಧಿಕಾರಿಗಳನ್ನು ಬಂಧಿಸಿ, ವಿಚಾರಣೆ ನಡೆಸಿತ್ತು.