ಹೈದರಾಬಾದ್ (ಪಿಟಿಐ): ಜೆಎನ್ಯು ವಿವಾದಕ್ಕೆ ಸಂಬಂಧಿಸಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೇರಿ ಒಂಬತ್ತು ಜನರ ವಿರುದ್ಧ ಇಲ್ಲಿನ ಸರೂರ್ನಗರ ಪೊಲೀಸ್ ಠಾಣೆಯಲ್ಲಿ ದೇಶದ್ರೋಹ ಆರೋಪದಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ರಾಹುಲ್, ಕೇಜ್ರಿವಾಲ್, ಯೆಚೂರಿ, ಕಾಂಗ್ರೆಸ್ ಮುಖಂಡರಾದ ಆನಂದ್ ಶರ್ಮಾ, ಅಜಯ್ ಮಾಕನ್, ಸಿಪಿಐ ಮುಖಂಡ ಡಿ. ರಾಜಾ, ಜೆಡಿಯು ವಕ್ತಾರ ಕೆ.ಸಿ. ತ್ಯಾಗಿ, ಜೆಎನ್ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಮತ್ತು ಸಂಶೋಧನಾ ವಿದ್ಯಾರ್ಥಿ ಉಮರ್ ಖಾಲಿದ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ವಕೀಲ ಜನಾರ್ದನ ಗೌಡ್ ಎಂಬವರು ಸಲ್ಲಿಸಿದ ದೂರಿನ ಆಧಾರದಲ್ಲಿ ಇಲ್ಲಿನ ಮೆಟ್ರೊಪಾಲಿಟನ್ ನ್ಯಾಯಾಲಯದ ನಿರ್ದೇಶನದಂತೆ ಎಫ್ಐಆರ್ ದಾಖಲಿಸಲಾಗಿದೆ ಎಂದು ಸರೂರ್ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎಸ್. ಲಿಂಗಯ್ಯ ಹೇಳಿದ್ದಾರೆ.
ಕನ್ಹಯ್ಯಾ ವಿರುದ್ಧ ದೆಹಲಿ ಪೊಲೀಸರು ದೇಶದ್ರೋಹದ ಪ್ರಕರಣ ದಾಖಲಿಸಿರುವುದು ರಾಹುಲ್ ಮತ್ತು ಇತರ ಮುಖಂಡರಿಗೆ ತಿಳಿದಿತ್ತು. ಹಾಗಿದ್ದರೂ ಅವರು ಜೆಎನ್ಯುಗೆ ಹೋಗಿ ಅಲ್ಲಿನ ವಿದ್ಯಾರ್ಥಿಗಳಿಗೆ ಬೆಂಬಲ ನೀಡಿದ್ದಾರೆ. ಹಾಗಾಗಿ ಇದು ದೇಶದ್ರೋಹವೇ ಆಗುತ್ತದೆ ಎಂದು ಗೌಡ್ ತಮ್ಮ ದೂರಿನಲ್ಲಿ ಹೇಳಿದ್ದರು.