ಜಬಲ್ಪುರ್(ಮಧ್ಯಪ್ರದೇಶ): ದೇಶದಲ್ಲಿ ಅಸಹಿಷ್ಣುತೆ ವಾತಾವರಣ ಹೆಚ್ಚುತ್ತಿದೆ ಎನ್ನುವ ಅಮೀರ್ ಖಾನ್ ಹೇಳಿಕೆಯ ಬಗ್ಗೆ ಪರ ಮತ್ತು ವಿರೋಧವಾಗಿ ವಾದ ಮಂಡಿಸುವವರಿರಬಹುದು. ಆದರೆ, ದಂಪತಿಗಳ ಮಧ್ಯೆ ಅಮೀರ್ ಖಾನ್ ಹೇಳಿಕೆಯ ಬಗ್ಗೆ ಚರ್ಚೆ ನಡೆದು ಪತ್ನಿ ಕೋಪದ ಭರದಲ್ಲಿ ವಿಷ ಸೇವಿಸಿ ಸಾವನ್ನಪ್ಪಿದ ಘಟನೆ ವರದಿಯಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಲಹರಿ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದ ದಂಪತಿಗಳಾದ ಅಯಾಂಕ್ ಪಾಂಡೆ ಮತ್ತು ಪತ್ನಿ ಸೋನಾಲ್ ಮಧ್ಯೆ ಅಮೀರ್ ಖಾನ್ ಅಸಹಿಷ್ಣುತೆ ಹೇಳಿಕೆ ಬಗ್ಗೆ ವಾಗ್ವಾದ ನಡೆದಿದೆ.ವಾಗ್ವಾದ ವಿಕೋಪಕ್ಕೆ ತೆರಳಿದಾಗ ಪತ್ನಿ ವಿಷ ಸೇವಿಸಿದ್ದಾಳೆ.
ಸೋನಾಲ್ಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ವೈದ್ಯರು ನೀಡಿದ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ
ಕೋತ್ವಾಲಿ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣನ್ನು ದಾಖಲಿಸಿದ್ದು, ಮೃತದೇಹವನ್ನು ಪೋಸ್ಟ್ ಮಾರ್ಟಂಗಾಗಿ ಕಳುಹಿಸಲಾಗಿದೆ. ಘಟನೆಯ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆದಾಗ್ಯೂ ಅಮೀರ್ ಖಾನ್ ತಾನೊಬ್ಬ ಹೆಮ್ಮೆಯ ಭಾರತೀಯ. ದೇಶವನ್ನು ತೊರೆಯುವ ಯಾವುದೇ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದ್ದರೂ ಇಂತಹ ಘಟನೆಗಳು ನಡೆಯುತ್ತಿರುವುದು ವಿಷಾದಕರ ಸಂಗತಿಯಾಗಿದೆ.