ನವದೆಹಲಿ: ಕಾಂಗ್ರೆಸ್ ರಾಷ್ಟ್ರ ವಿರೋಧಿ ಪಕ್ಷ, ಅದರ ಮಾನ್ಯತೆಯನ್ನು ರದ್ದುಗೊಳಿಸಬೇಕೆಂದು ಹೇಳುವುದರ ಮೂಲಕ ಪಂಜಾಬ್ ಉಪಮುಖ್ಯಮಂತ್ರಿ, ಶಿರೋಮಣಿ ಅಕಾಲಿದಳ ಮುಖಂಡ, ಸುಖ್ ಬೀರ್ ಸಿಂಗ್ ಬಾದಲ್ ಹೊಸದೊಂದು ವಿವಾದಕ್ಕೆ ನಾಂದಿ ಹಾಡಿದ್ದಾರೆ.
ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯೊಂದನ್ನು ಆಯೋಜಿಸಿ ಮಾತನಾಡುತ್ತಿದ್ದ ಅವರು, “ದೇಶದ ಅತಿ ಹಳೆಯ ಪಕ್ಷವಾದ ಕಾಂಗ್ರೆಸ್ ದೇಶ ವಿರೋಧಿ ಪಕ್ಷ. ಕಾಂಗ್ರೆಸ್ ಮುಖಂಡರು ಮೂಲಭೂತವಾದಿಗಳು. ಉಗ್ರ ಸಂಘಟನೆಗಳನ್ನು ಬೆಂಬಲಿಸುತ್ತಿರುವ ಕಾಂಗ್ರೆಸ್ ಕೇವಲ ರಾಜಕೀಯ ಲಾಭಕ್ಕಾಗಿ ಪಾಕಿಸ್ತಾನದ ಐಎಸ್ಐ ಜತೆಗೆ ನಂಟು ಬೆಳೆಸಿಕೊಂಡಿದೆ. ಖಲಿಸ್ತಾನ ಪ್ರತ್ಯೇಕವಾದಿಗಳ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು ಭಾಗಿಯಾಗಿದ್ದು, ಉಗ್ರರ ಜತೆ ನಂಟು ಹೊಂದಿರುವುದು ಬಯಲಾಗಿದೆ ಎಂದು ಆರೋಪಿಸಿದ್ದಾರೆ.
“80ರ ದಶಕದಲ್ಲಿ ಪಂಜಾಬ್ನಲ್ಲಿ ಏನೆಲ್ಲ ನಡೆಯಿತು ಎಂಬುದು ಎಲ್ಲರಿಗೂ ತಿಳಿದಿದೆ. ಉಗ್ರವಾದದ ಕಪಿಮುಷ್ಠಿಗೆ ಸಿಲುಕಿದ ಪಂಜಾಬ್ನಲ್ಲಿ 15 ವರ್ಷ ನಡೆದ ಸಂಘರ್ಷದಲ್ಲಿ ಸಾವಿರಾರು ಪಂಜಾಬಿಗರು ಜೀವವನ್ನು ಕಳೆದುಕೊಂಡಿದ್ದಾರೆ. ಈಗ ರಾಹುಲ್ ನೇತೃತ್ವದಲ್ಲಿ ಕಾಂಗ್ರೆಸ್ ಮತ್ತೆ ಆ ವಾತಾವರಣ ಮರುಕಳಿಸುವಂತೆ ಮಾಡ ಹೊರಟಿದೆ.ರಾಜಕೀಯ ಲಾಭಕ್ಕಾಗಿ ಉಗ್ರ ಸಂಘಟನೆಗಳನ್ನು ಬೆಂಬಲಿಸುತ್ತಿದೆ. ಕಾಂಗ್ರೆಸ್ನ ನಿಜಬಣ್ಣ ಬಯಲಾಗಿದೆ”, ಎಂದು ದೂರಿದರು.
ಕಾಂಗ್ರೆಸ್ ಮುಖಂಡರು, ಮೂಲಭೂತವಾದಿಗಳು ಹಾಗೂ ಪ್ರತ್ಯೇಕ ಖಾಲಿಸ್ತಾನಕ್ಕಾಗಿ ಹೋರಾಡುತ್ತಿರುವ ಪ್ರತ್ಯೇಕವಾದಿಗಳ ಜತೆಗೆ ವೇದಿಕೆ ಹಂಚಿಕೊಂಡಿದ್ದಾರೆ ಎಂದಿರುವ ಅವರು, ಈ ಕುರಿತ ವಿಡಿಯೋವನ್ನು ಸಹ ಬಿಡುಗಡೆ ಮಾಡಿದ್ದಾರೆ.
ಪಂಜಾಬ್ ವಿಧಾನಸಭೆಗೆ ಸದ್ಯದಲ್ಲಿಯೇ ಚುನಾವಣೆ ಘೋಷಣೆಯಾಗಲಿದೆ.