ನವದೆಹಲಿ: ಉತ್ತರ ಪ್ರದೇಶದ ಸಚಿವ ಆಜಂ ಖಾನ್ ಮತ್ತು ಎಂಐಎಂ ವರಿಷ್ಠ ಅಸಾದುದ್ದೀನ್ ಓವೈಸಿ ಮುಸ್ಲಿ ಸಮುದಾಯಕ್ಕೆ ಬಹುದೊಡ್ಡ ಅಪಾಯವಾಗಿ ಪರಿಣಮಿಸಿದ್ದಾರೆ ಎಂದು ಬಿಜೆಪಿ ನಾಯಕ ಶಹನವಾಜ್ ಹುಸೇನ್ ಆರೋಪಿಸಿದ್ದಾರೆ.
ರವಿವಾರ ಪ್ರೇಮ ಸ್ಮಾರಕ ತಾಜ್ ಮಹಲ್ಗೆ ಭೇಟಿ ನೀಡಿದ್ದ ಅವರು, “ಭಾರತ ಮುಸ್ಲಿಂ ಸಮುದಾಯದವರಿಗೆ ಸುರಕ್ಷಿತ ದೇಶ. ಆದರೆ ಆಜಂ ಖಾನ್ ಮತ್ತು ಅಸಾವುದ್ದೀನ್ ಓವೈಸಿಯಂತಹ ರಾಜಕೀಯ ನಾಯಕರು ನಮ್ಮ ಸಮುದಾಯಕ್ಕೆ ಹಾನಿಯನ್ನುಂಟು ಮಾಡುತ್ತಾ ಇರುತ್ತಾರೆ. ಎಲ್ಲರೂ ಇದನ್ನು ಅರಿತುಕೊಳ್ಳಬೇಕು”, ಎಂದು ಹೇಳಿದರು.
ಬಿಹಾರ್ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಹೊರತಾಗಿಯೂ 2017ರಲ್ಲಿ ಉತ್ತರ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಭರ್ಜರಿ ಜಯ ಸಾಧಿಸಲಿದೆ ಎಂದು ಅವರು ವಿಶ್ವಾಸವನ್ನು ವ್ಯಕ್ತ ಪಡಿಸಿದ್ದಾರೆ.
ಬಿಎಸ್ಪಿ, ಎಸ್ಪಿ ಮೈತ್ರಿಕೂಟ ರಚನೆಯಾಗಲಿದೆ ಎಂಬ ಊಹಾಪೋಹಗಳ ಕುರಿತು ಪ್ರತಿಕ್ರಿಯಿಸಿದ ಅವರು ಎರಡು ಪಕ್ಷಗಳು ವಿಲೀನಗೊಂಡರೂ ಬಿಜೆಪಿ ಉತ್ತರ ಪ್ರದೇಶದಲ್ಲಿ ಗೆಲುವನ್ನು ಸಾಧಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಸಿಎಂ ಅಖಿಲೇಶ್ ಯಾದವ್ ಸೋತಿದ್ದಾರೆ ಎಂದು ಗುಡುಗಿದ ಅವರು ಮುಲಾಯಂ ಮತ್ತು ಮಾಯಾವತಿ ಬಿಜೆಪಿಯನ್ನು ಸೋಲಿಸಲು ಸಾಧ್ಯವಿಲ್ಲವೆಂದಿದ್ದಾರೆ.