ಸಂಭಾಲ್(ಉತ್ತರಪ್ರದೇಶ: ಸೂಪರ್ ಪವರ್ ದೇಶಗಳು ಅರಬ್ ದೇಶಗಳ ಮುಗ್ದರ ಮೇಲೆ ನಡೆಸಿದ ಮಾರಣಹೋಮದ ಪ್ರತೀಕಾರವಾಗಿ ಪ್ಯಾರಿಸ್ ಮೇಲೆ ಉಗ್ರರು ದಾಳಿ ನಡೆಸಿದ್ದಾರೆಯೇ ಎನ್ನುವ ಬಗ್ಗೆ ಯೋಚಿಸಬೇಕು ಎಂದು ಹೇಳಿಕೆ ನೀಡಿದ ಉತ್ತರಪ್ರದೇಶದ ಸಚಿವ ಆಜಂ ಖಾನ್ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.
ಉತ್ತರಪ್ರದೇಶದ ಸಮಾಜವಾದಿ ಪಕ್ಷದ ಸಚಿವರಾದ ಆಜಂ ಖಾನ್, ಪ್ಯಾರಿಸ್ ಮೇಲಿನ ಉಗ್ರರ ದಾಳಿಯನ್ನು ಖಂಡಿಸಿದರಾದರೂ ಅಮೆರಿಕ ಮತ್ತು ರಷ್ಯಾ ಅರಬ್ ದೇಶಗಳ ಮೇಲೆ ದಾಳಿ ಮಾಡಿ ಮುಗ್ದರನ್ನು ಹತ್ಯೆ ಮಾಡಿರುವುದು ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ ಎಂದು ಗುಡುಗಿದ್ದಾರೆ.
ಪ್ಯಾರಿಸ್ ಮೇಲೆ ನಡೆದ ದಾಳಿ ಖಂಡನಾರ್ಹ. ಆದರೆ, ಅಮೆರಿಕ ಮತ್ತು ರಷ್ಯಾ ದೇಶಗಳ ಅರಬ್ ರಾಷ್ಟ್ರಗಳ ಮೇಲಿನ ದಾಳಿ ಕೂಡಾ ಸರಿಯಲ್ಲ ಎಂದು ಖಾನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮೊದಲು ಯಾರನ್ನು ಯಾರು ಹತ್ಯೆ ಮಾಡಿದರೂ ನಂತರ ಯಾರು ಪ್ರತಿಕಾರ ತೀರಿಸಿಕೊಂಡರು ಎನ್ನುವ ಬಗ್ಗೆ ಯೋಚಿಸಬೇಕಾಗಿದೆ. ಇದೊಂದು ಚರ್ಚಾ ವಿಷಯವಾಗಿದೆ. ನೀವು ಬಾಂಬ್ ಮತ್ತು ದ್ರೋಣ್ಗಳಿಂದ ಮುಗ್ದರನ್ನು ಹತ್ಯೆ ಮಾಡುತ್ತೀರಿ. ಯಾರು ಉಗ್ರರು ಯಾರು ತಪ್ಪಿತಸ್ಥರು ಎನ್ನುವುದನ್ನು ಕಾಲವೇ ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ.
ಸಚಿವ್ ಆಜಂಖಾನ್ ಹೇಳಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ, ಸಮಾಜವಾದಿ ಪಕ್ಷದ ನಾಯಕತ್ವ ಆಜಂ ಹೇಳಿಕೆಯನ್ನು ಸಾರ್ವಜನಿಕವಾಗಿ ಒಪ್ಪಿಕೊಳ್ಳದಿದ್ದಲ್ಲಿ ಭಯೋತ್ಪಾದನೆಗೆ ಪರೋಕ್ಷ ಬೆಂಬಲ ನೀಡಿದಂತಾಗುತ್ತದೆ ಎಂದು ವಾಗ್ದಾಳಿ ನಡೆಸಿದೆ.
ಬಿಜೆಪಿ ಕಾರ್ಯದರ್ಶಿ ಸಿದ್ಧಾರ್ಥನಾಥ್ ಸಿಂಗ್ ಮಾತನಾಡಿ, ಸಚಿವ ಆಜಂಖಾನ್ ಇಂತಹ ಹೇಳಿಕೆಗಳನ್ನು ನೀಡದಂತೆ ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ತಡೆಯಬೇಕು ಎಂದು ಹೇಳಿದ್ದಾರೆ.