ಪಾಟ್ನಾ: ಬಿಹಾರ ವಿಧಾನ ಸಭೆ ಚುನಾವಣೆಯಲ್ಲಿ ಅಬ್ಬರದ ಪ್ರಚಾರ ಮಾಡಿದ ಕೇಸರಿ ಪಾಳೇಯ ಆಂತರಿಕ ಬೇಗುದಿಯಿಂದ ಬಳಲುತ್ತಿದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ವ್ಯಂಗ್ಯವಾಡಿದ್ದಾರೆ.
ಬಿಹಾರದಲ್ಲಿ ಬಿಜೆಪಿ ಸೋಲಿಗೆ ಮೋದಿ ಮತ್ತು ಅಮಿತ್ ಶಾ ಅವರೇ ಹೊಣೆ ಎಂದು ಹಿರಿಯ ನಾಯಕರುಗಳಾದ ಎಲ್.ಕೆ.ಆಡ್ವಾಣಿ, ಎಂ.ಎಂ.ಜೋಷಿ, ಶಾಂತಕುಮಾರ್ ಮತ್ತು ಯಶವಂತ್ ಸಿನ್ಹಾ ಹೇಳಿಕೆ ನೀಡಿದ್ದರು. ಬಿಜೆಪಿ ಸೋಲಿಗೆ ಪಕ್ಷದ ವರಿಷ್ಠರು ಮೋದಿ ವಿರುದ್ಧ ಬಂಡಾಯದ ಭಾವುಟ ಬೀಸಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ನಿತೀಶ್, ‘ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಸಹಜ’ ಎಂದು ಟೀಕಿಸಿದ್ದಾರೆ.
‘ಚುನಾವಣೆ ಪ್ರಚಾರದ ವೇಳೆ ಅಬ್ಬರ ತೋರಿದ ಬಿಜೆಪಿ, ಸೋತ ನಂತರವೂ ಅದೇ ತರಹದ ತೀಕ್ಷ್ಣ ಪ್ರತಿಕ್ರಿಯೆಯೆನ್ನು ಎದುರಿಸಬೇಕು ಎಂದು ನಿತೀಶ್ ಕುಮಾರ್ ಹೇಳಿದ್ದಾರೆ. ಆಡ್ವಾಣಿ ಮತ್ತು ಜೋಷಿ ಬಿಜೆಪಿ ರಾಷ್ಟ್ರದಲ್ಲಿ ನೆಲೆಯೂರಲು ಕಾರಣಕರ್ತರಾದವರು. ಅಂಥವರು ಈ ರೀತಿ ಹೇಳುತ್ತಿದ್ದಾರೆಂದರೆ ಪಕ್ಷದಲ್ಲಿ ಗೊಂದಲವಿದೆ ಎಂದೇ ಅರ್ಥ, ಎಂದು ನಿತೀಶ್ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.