ವಾಸ್ಕೋ ಡ ಗಾಮ: ಸಮಾನ ವೇತನ, ಸಮಾನ ಪಿಂಚಣಿ ಯೋಜನೆ ಜಾರಿಗೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಅಧಿಸೂಚನೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಮಾಜಿ ಸೇನಾಧಿಕಾರಿಗಳ ವರ್ತನೆ ಸೈನಿಕರಿಗಿಂತ ಭಿನ್ನವಾಗಿದೆ ಮತ್ತು ಅವರಿಗೆ ತಪ್ಪು ಮಾರ್ಗದರ್ಶನ ಮಾಡಲಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ತಿಳಿಸಿದ್ದಾರೆ.
ಕಳೆದ ಒಂದು ವರ್ಷದಲ್ಲಿ ಒಆರ್ ಒಪಿ ಯೋಜನೆ ಬಿಜೆಪಿ ಸರ್ಕಾರದ ಬಹು ದೊಡ್ಡ ಸಾಧನೆ. ಯೋಜನೆಗೆ ಅಂತಿಮ ಕ್ರಮ ತೆಗೆದುಕೊಂಡಿದ್ದು ನಮ್ಮದೇ ಸರ್ಕಾರ. ಯೋಜನೆಗೆ ಸಂಬಂಧಪಟ್ಟಂತೆ ಪ್ರತಿಭಟನಾಕಾರರಿಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಹೇಳಿದರು.
ನಿವೃತ್ತ ಯೋಧರಿಗೆ ಏನಾದರೂ ಸಮಸ್ಯೆಗಳು, ತೊಂದರೆಯಿದ್ದಲ್ಲಿ ಅದನ್ನು ನ್ಯಾಯಾಂಗ ಆಯೋಗದ ಮುಂದೆ ಸಲ್ಲಿಸಬಹುದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಬೇಡಿಕೆ ಇಡುವ ಹಕ್ಕಿದೆ. ಆದರೆ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಿ ಲ್ಲ ಎಂದು ಪರ್ರಿಕರ್ ನಿನ್ನೆ ಹೇಳಿದ್ದರು.
ಕೇಂದ್ರ ಸರ್ಕಾರ ಕಳೆದ ಶನಿವಾರ ಸಮಾನ ಶ್ರೇಣಿ, ಸಮಾನ ಪಿಂಚಣಿ ಯೋಜನೆಯನ್ನು ಜಾರಿಗೆ ಅಧಿಸೂಚನೆ ಪ್ರಕಟಿಸಿತ್ತು. ಆದರೆ ಅಧಿಸೂಚನೆಯಲ್ಲಿ ಪ್ರಕಟಿಸಿದ ಅಂಶಗಳನ್ನು ನಿವೃತ್ತ ಯೋಧರು ಒಪ್ಪುತ್ತಿಲ್ಲ. ಹಲವರು ತಮ್ಮ ಪದಕಗಳನ್ನು ಹಿಂತಿರುಗಿಸುತ್ತಿದ್ದಾರೆ.