ಹೊಸದಿಲ್ಲಿ, ಸೆ.22: ಗುಜರಾತ್ ಹತ್ಯಾಕಾಂಡ ಮತ್ತು ನಕಲಿ ಎನ್ಕೌಂಟರ್ಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಶಾಮೀಲಾಗಿದ್ದಾರೆ ಎಂದು ಖ್ಯಾತ ಸುಪ್ರೀಂ ಕೋರ್ಟ್ ವಕೀಲ ಹಾಗೂ ಆಮ್ ಆದ್ಮಿ ಪಕ್ಷದ ಮಾಜಿ ನಾಯಕ ಪ್ರಶಾಂತ್ ಭೂಷಣ್ ಆರೋಪಿಸಿದ್ದಾರೆ.
ಗುಜರಾತ್ ಗಲಭೆಯಲ್ಲಿ ಭಾರತದ ಆಡಳಿತ ಪಕ್ಷದ ಈ ಇಬ್ಬರು ನಾಯಕರ ಶಾಮೀಲಾತಿಯ ಬಗ್ಗೆ ನಿಜವಾಗಿಯೂ ಬಲವಾದ ದಾಖಲೆಗಳಿವೆ ಎಂಬುದಾಗಿ ಗುಜರಾತ್ನ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾರನ್ನು ಉಲ್ಲೇಖಿಸಿ ಭೂಷಣ್ ಟ್ವಿಟರ್ನಲ್ಲಿ ಬರೆದಿದ್ದಾರೆ.
ಗುಜರಾತ್ನ ಅಂದಿನ ಮೋದಿ ಸರಕಾರ ಗಲಭೆಕೋರರೊಂದಿಗೆ ಶಾಮೀಲಾಗಿತ್ತು ಎಂಬುದಾ ಗಿಯೂ ಭೂಷಣ್ ಆರೋಪಿ ಸಿದ್ದಾರೆ. ನ್ಯಾಯಾಲಯಕ್ಕಾಗಿ ಮೆಹ್ತಾ ಸಿದ್ಧಪಡಿಸಿದ್ದ ಗೌಪ್ಯ ವರದಿಗಳು ‘‘ಗಲಭೆಕೋರರಿಗೆ ಸೋರಿಕೆಯಾಗುತ್ತಿದ್ದವು’’ ಎಂದು ಭೂಷಣ್ ಆರೋಪಿಸಿದ್ದಾರೆ.
2011ರ ಆಗಸ್ಟ್ನಲ್ಲಿ ಇದೇ ಮಾತುಗಳನ್ನು ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಕೂಡ ಸುಪ್ರೀಂ ಕೋರ್ಟ್ಗೆ ಹೇಳಿದ್ದರು. 2002ರ ಕೋಮು ಗಲಭೆಯ ಆರೋಪಿಗಳನ್ನು ಶಿಕ್ಷಿಸಬೇಕಾಗಿದ್ದ ಗುಜರಾತ್ ಸರಕಾರ, ವಾಸ್ತವಿಕವಾಗಿ ಆರೋಪಿಗಳು ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಸಾಧ್ಯವಾಗುವಂತೆ ಅವರಿಗೆ ಮಾಹಿತಿಗಳನ್ನು ಸೋರಿಕೆ ಮಾಡುತ್ತಿತ್ತು ಎಂದು ಭಟ್ ಆರೋಪಿಸಿದ್ದರು.
ಇತ್ತೀಚೆಗೆ ಭಟ್ರನ್ನು ಅವರ ಹುದ್ದೆಯಿಂದ ವಜಾಗೊಳಿಸಲಾಗಿತ್ತು. ಈ ಕ್ರಮಕ್ಕೆ ಕೇಂದ್ರ ಗೃಹಸಚಿವ ರಾಜ್ನಾಥ್ ಸಿಂಗ್ ಅನುಮೋದನೆ ನೀಡಿದ್ದರು. ಗುಜರಾತ್ ಗಲಭೆಯಲ್ಲಿ ಅಂದಿನ ಮೋದಿ ಸರಕಾರ ಶಾಮೀಲಾಗಿತ್ತು ಎಂದು ಆರೋಪ ಮಾಡುವ ಮೂಲಕ ಸರಕಾರವನ್ನು ಎದುರು ಹಾಕಿಕೊಂಡಿರುವುದಕ್ಕೆ ತಾನು ಬೆಲೆ ತೆರುತ್ತಿದ್ದೇನೆ ಎಂಬುದಾಗಿ ಭಟ್ ಯಾವಾಗಲೂ ಹೇಳುತ್ತಿದ್ದರು.
ಗಲಭೆಗಳ ವೇಳೆ ಸಹಾಯ ಮಾಡುವಂತೆ ಕೋರಿ ಕರೆಗಳು ಬಂದರೆ ಅವುಗಳನ್ನು ನಿರ್ಲಕ್ಷಿಸುವಂತೆ ಮುಖ್ಯಮಂತ್ರಿ ನರೇಂದ್ರ ಮೋದಿ ಪೊಲೀಸರಿಗೆ ಸೂಚನೆ ನೀಡಿದ್ದರು ಎಂಬುದಾಗಿಯೂ ಸಂಜೀವ್ ಭಟ್ ಆರೋಪಿಸಿದ್ದರು.
ಗುಜರಾತ್ ಗಲಭೆಯಲ್ಲಿ ಸುಮಾರು 1,200 ಮಂದಿ ಮೃತಪಟ್ಟಿದ್ದು, ಹೆಚ್ಚಿನವರು ಮುಸ್ಲಿಮರಾಗಿದ್ದಾರೆ. ಕೆಲವು ಗಲಭೆ ಆರೋಪಿಗಳ ವಕೀಲರೊಂದಿಗೆ ರಾಜ್ಯ ಸರಕಾರ ಯಾವ ರೀತಿಯಲ್ಲಿ ಮಾಹಿತಿ ಹಂಚಿಕೊಳ್ಳುತ್ತಿತ್ತು ಎಂಬುದನ್ನು ತೋರಿಸುವ ಇಮೇಲ್ಗಳನ್ನು ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಿದ ಅಫಿದಾವಿತ್ನ ಜೊತೆಗೆ ಭಟ್ ಲಗತ್ತಿಸಿದ್ದರು.