ಸಾಂಬಾ(ಜಮ್ಮುಕಾಶ್ಮೀರ)ಸೆ.21- ಭಾರತಕ್ಕೆ ಗಡಿ ವಿಸ್ತರಣೆ ಆಕಾಂಕ್ಷೆಯಿಲ್ಲ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಮಗ್ ನೆರೆಯ ರಾಷ್ಟ್ರಗಳೊಂದಿಗೆ ಅದರಲ್ಲೂ ವಿಶೇಷವಾಗಿ ಪಾಕಿಸ್ತಾನ ಮತ್ತು ಚೀನಾಗಳೊಂದಿಗೆ ದೇಶ ಉತ್ತಮವಾದ ಸ್ನೇಹ-ಬಾಂಧವ್ಯ ಬಯಸುತ್ತದೆ ಮತ್ತು ಗಡಿಗಳಿಗೆ ಸಂಬಂಧಿಸಿದ ಎಲ್ಲ ವಿವಾದಗಳನ್ನು ಮಾತುಕತೆ ಮೂಲಕ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಇಷ್ಟಪಡುತ್ತದೆ ಎಂದು ಹೇಳಿದ್ದಾರೆ.
ರಾಜನಾಥ್ ಸಿಂಗ್ ಅವರು ಪಾಕಿಸ್ತಾನ ಮತ್ತು ಚೀನಾ ದೇಶಗಳ ಗಡಿ ಭಾಗದಲ್ಲಿ ಮೂರು ದಿನಗಳ ಪ್ರವಾಸ ಆರಂಭಿಸಿದ್ದು, ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಹಾಗೂ ಗಡಿ ಕಾಯುವ ಯೋಧರ ಪರಿಸ್ಥಿತಿಗಳ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ.
ಗಡಿಪ್ರದೇಶದಲ್ಲಿ ಆ ಕಡೆಗಳಿಂದ ಅತಿಕ್ರಮ ಮಾಡುವುದು ನಿಲ್ಲಬೇಕು, ಗಡಿಯಲ್ಲಿ ಶಾಂತಿ ನೆಲೆಗೊಳಿಸುವ ಪ್ರಯತ್ನಗಳನ್ನು ಮೂರೂ ರಾಷ್ಟ್ರಗಳು ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದರು,
ಚೀನಾ ಮತ್ತು ಪಾಕಿಸ್ತಾನಗಳ ಜೊತೆ ಒಳ್ಳೆಯ ಸಂಬಂಧ ವೃದ್ದಿಸುವುದನ್ನು ನಾವು ಬಯಸುತ್ತೇವೆ. ನೆರೆಹೊರೆ ದೇಶಗಳ ನಡುವೆ ಶಾಂತಿ ನೆಲೆಸದೆ ಏಷ್ಯಾದ ಅಭಿವೃದ್ದಿ ಕನಸಿನ ಮಾತೇ ಎಂದು ಸಚಿವ ರಾಜನಾಥ್ ಸಿಂಗ್ ಎಚ್ಚರಿಸಿದ್ದಾರೆ.