ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಗೋಮಾಂಸ ಮಾರಾಟಕ್ಕೆ ಅಲ್ಲಿನ ಹೈಕೋರ್ಟ್ ನಿಷೇಧ ಹೇರಿರುವುದನ್ನು ವಿರೋಧಿಸಿರುವ ಕೆಲ ಸಂಘಟನೆಗಳು ಕೈಗೊಂಡಿದ್ದ ಪ್ರತಿಭಟನೆ ತ್ರೀವ್ರಗೊಂಡಿದ್ದು, ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ಸಂಭವಿಸಿದೆ.
ಘರ್ಷಣೆ ವೇಳೆ ಪ್ರತಿಭಟನಾಕಾರರು ಪಾಕಿಸ್ತಾನ ಮತ್ತು ಇಸ್ಲಾಮಿಕ್ ಸ್ಟೇಟ್ ಬಾವುಟನ್ನು ಹಾರಿಸಿದ್ದಾರೆ. ಶುಕ್ರವಾರದ ಪ್ರಾರ್ಥನೆ ನಂತರ ಕೆಲ ಯುವಕರು ಗೋಮಾಂಸ ನಿಷೇಧ ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಐತಿಹಾಸಿಕ ಇತಿಹಾಸವಿರುವ ಜಾಮಿಯಾ ಮಸೀದಿ ಬಳಿ ಆ ಯುವಕರು ಅಲ್ ಜಿಹಾದ್ ಉಗ್ರ ಸಂಘಟನೆ, ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಮತ್ತು ಪಾಕಿಸ್ತಾನದ ಬಾವುಟಗಳನ್ನು ಪ್ರದರ್ಶಿಸಿದ್ದಾರೆ.
ಅಷ್ಟೇ ಅಲ್ಲದೇ, ಲಷ್ಕರ್ ಇ ತೋಯ್ಬಾ ಸಂಸ್ಥಾಪಕ ಹಫೀಜ್ ಸಯ್ಯದ್ ಮತ್ತು ಹಿಜ್ ಬುಲ್ ಮುಜಾದ್ದೀನ್ ಕಮಾಂಡರ್ ಬುರ್ಹನ್ ಮುಜಾಫರ್ ಇರುವ ಪೋಸ್ಟರ್ ಗಳನ್ನು ತಂದು ಪ್ರದರ್ಶಿಸಿದ್ದಾರೆ. ನಂತರ ಪೊಲೀಸರ ಮೇಲೆ ಕೆಲ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದಾರೆ. ಭಾರೀ ಕಲ್ಲೆಸೆತದಲ್ಲಿ ತೊಡಗಿದ್ದ ಗುಂಪನ್ನು ಚದುರಿಸಲು ಪೊಲೀಸರು ಅಶ್ರು ವಾಯು ಸಿಡಿಸಿದ್ದಾರೆ. ಗಾಯಾಳುಗಳ ಬಗ್ಗೆ ಇನ್ನು ವರದಿಯಾಗಿಲ್ಲ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.