ನವದೆಹಲಿ: ಅಂತರಾಷ್ಟ್ರೀಯ ಗಡಿ ರೇಖೆಯಲ್ಲಿ ಭಾರತ ಮೊದಲು ಗುಂಡು ಹಾರಿಸಲು ಮುಂದಾಗುವುದಿಲ್ಲ ಎಂದು ಕೇಂದ್ರ ಸಚಿವ ರಾಜನಾಥ್ ಸಿಂಗ್ ಗಡಿ ಸಮಸ್ಯೆ ನಿವಾರಿಸಿಕೊಳ್ಳವು ನಿಟ್ಟಿನಲ್ಲಿ ಭಾರತಕ್ಕೆ ಆಗಮಿಸಿರುವ ಪಾಕಿಸ್ತಾನದ ನಿಯೋಗಕ್ಕೆಹೇಳಿದ್ದಾರೆ.
ಪ್ರಚೋದಿತ ಗುಂಡಿನ ದಾಳಿ ಇಲ್ಲದೇ, ಭಾರತ ತಾನಾಗಿಯೇ ಗುಂಡಿನ ದಾಳಿ ನಡೆಸಿಲ್ಲ. ನೆರೆ ದೇಶಗಳೊಂದಿಗೆ ಉತ್ತಮ ಸ್ನೇಹ- ಬಾಂಧವ್ಯ ಹೊಂದಲು ಭಾರತ ಬಯಸುತ್ತದೆ. ಆದ ಕಾರಣ, ಪಾಕಿಸ್ತಾನದ ಕಡೆಗೆ ಭಾರತ ಮೊದಲ ಗುಂಡು ಹಾರಿಸುವುದಿಲ್ಲ ಎಂದು ಪಾಕಿಸ್ತಾನ ರೇಜರ್ಸ್ ಮಟ್ಟದ ಅಧಿಕಾರಿಗಳಿಗೆ ರಾಜನಾಥ್ ಸಿಂಗ್ ಸ್ಪಷ್ಟ ಪಡಿಸಿದ್ದಾರೆ.
ಪಾಕಿಸ್ತಾನದ ಕಡೆಯಿಂದ ಯಾವುದೇ ನುಸುಳುವಿಕೆಗೆ ಅವಕಾಶ ನೀಡುವುದಿಲ್ಲವೆಂದು ಖಚಿತಪಡಿಸಬೇಕು ಎಂದು ರಾಜನಾಥ್ ಕೇಳಿದ್ದು, ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಭಾರತದೊಂದಿಗೆ ಕೈಜೋಡಿಸಬೇಕೆಂದೂ ಒತ್ತಾಯಿಸಿದ್ದಾರೆ. ನಾವು ಸ್ನೇಹಿತರನ್ನು ಬದಲಾಯಿಸಿಕೊಳ್ಳಬಹುದು, ಆದರೆ, ನೆರೆಹೊರೆಯವರನಲ್ಲ ಎಂಬ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮಾತನ್ನು ಮೆಲುಕಹಾಕಿದ ರಾಜನಾಥ್ ಸಿಂಗ್, ನೆರೆ ರಾಷ್ಟ್ರದೊಂದಿಗೆ ಉತ್ತಮ ಸ್ನೇಹ ಹೊಂದುವುದು ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರನ್ನು ರಷ್ಯಾದ ಉಫಾದಲ್ಲಿ ಭೇಟಿಯಾಗಿದ್ದರಾದರು, ಉಭಯ ದೇಶಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಾತುಕತೆ ನಡೆಯಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಸಿಂಗ್, ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಲು ಭಾರತ ಇಚ್ಛಿಸುತ್ತದೆ ಎಂದು ತಿಳಿಸಿದ್ದಾರೆ.