ಗೋರಖ್ಪುರ್: ಸಾಮಾನ್ಯವಾಗಿ ಸಂಬಳ ಜಾಸ್ತಿ ಮಾಡದೇ ಇದ್ದರೆ ಮೇಲಾಧಿಕಾರಿ ಜತೆ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸಲು ನೋಡುತ್ತಾರೆ. ಆದರೆ ಗೋರಖ್ಪುರದ ಶಾಲೆಯೊಂದರಲ್ಲಿ ಸಂಬಳ ಜಾಸ್ತಿ ಮಾಡದೇ ಇರುವುದಕ್ಕೆ ಶಿಕ್ಷಕರು ಮುಖ್ಯೋಪಾಧ್ಯಾಯರಿಗೆ ಬೆದರಿಕೆಯನ್ನೊಡ್ಡಿದ್ದಾರೆ. ಅದು ಅಂತಿಂಥ ಬೆದರಿಕೆಯಲ್ಲ!.
ಬೆದರಿಕೆ ಏನು?
ಇಲ್ಲಿನ ಕಸ್ತೂರ್ ಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿ ಅಲ್ಲಿನ ಪಾರ್ಟ್ ಟೈಂ ಶಿಕ್ಷಕರು ಸಂಬಳ ಜಾಸ್ತಿ ಮಾಡದೇ ಇದ್ದರೆ ನಾವು ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳುತ್ತೇವೆ ಎಂದು ಮುಖ್ಯೋಪಾಧ್ಯಾಯರಿಗೆ ಬೆದರಿಕೆಯನ್ನೊಡ್ಡಿದ್ದಾರೆ.
ಶಿಕ್ಷಕರು ಹೇಳುವುದೇನು? : 2014ರಲ್ಲಿ ಉರ್ದು ಕಲಿಸುತ್ತಿರುವ ಫುಲ್ ಟೈಂ ಮತ್ತು ಪಾರ್ಟ್ ಟೈಂ ಅಧ್ಯಾಪಕರ ಸಂಬಳವನ್ನು ಜಾಸ್ತಿ ಮಾಡಲಾಗಿತ್ತು. ಆದರೆ ಹಿಂದಿ ಮತ್ತು ಸಂಸ್ಕೃತ ಕಲಿಸುವ ಶಿಕ್ಷಕರಿಗೆ ತಿಂಗಳಿಗೆ 7,200 ರು. ಇದ್ದ ನಮ್ಮ ಸಂಬಳವನ್ನು ರು. 5000 ಮಾಡಲಾಗಿದೆ.
ಸಂಬಳ ಹೆಚ್ಚಿಸದೇ ಇದ್ದರೆ ನಾವು ಮುಸ್ಲಿಂ ಧರ್ಮಕ್ಕೆ ಮತಾಂತರವಾಗುತ್ತೇವೆ ಎಂದು ಶಿಕ್ಷಕರೀಗ ಬೆದರಿಕೆಯನ್ನೊಡ್ಡಿದ್ದಾರೆ. ಈ ತಾರತಮ್ಯದ ಬಗ್ಗೆ ಬುಧವಾರ ಶಾಲೆಯಲ್ಲಿ ಪ್ರಾತ್ಯಕ್ಷಿಕೆಯನ್ನೂ ಕೈಗೊಳ್ಳಲಾಯಿತು ಎಂದು ಮಾಧ್ಯಮವೊಂದು ವರದಿ ಮಾಡಿದೆ.