ಕಾನ್ಪುರ: ರಕ್ಷಾ ಬಂಧನದ ಹಬ್ಬದ ಹಿನ್ನೆಲೆಯಲ್ಲಿ ಕೈಗೆ ರಾಖಿ ಹಾಗೂ ಮೆಹಂದಿ ಇಟ್ಟುಕೊಂಡು ಬಂದ ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯ ಎಸಗಿರುವ ಘಟನೆ ಕಾನ್ಪುರದ ಸೈಂಟ್ ಮೆರೀಸ್ ಕಾನ್ವೆಂಟ್ ಶಾಲೆಯಲ್ಲಿ ನಡೆದಿದೆ.
ಕೈಗೆ ರಾಖಿ, ಮೆಹಂದಿ ಇಟ್ಟುಕೊಂಡು ಶಾಲೆಗೆ ಬಂದ ವಿದ್ಯಾರ್ಥಿನಿಯರನ್ನು ಬಿಸಿಲಲ್ಲಿ ನಿಲ್ಲಿಸಿದ ಶಾಲಾ ಶಿಕ್ಷಕರು, ನಂತರ ಕೈಗಳನ್ನು ಕಲ್ಲಿಗೆ ಬಲವಂತವಾಗಿ ಉಜ್ಜಿ ಮೆಹಂದಿಯನ್ನು ತೆಗೆಸಿದ್ದು, ಇದರಿಂದ ಕೈಗಳಲ್ಲಿ ರಕ್ತ ಬಂದಿದೆ. ಅಲ್ಲದೆ ಕೈಗೆ ಕಟ್ಟಿದ ರಾಖಿಯನ್ನು ಕಿತ್ತುಹಾಕಿದ್ದಾರೆನ್ನಲಾಗಿದೆ.
ಈ ವಿಷಯ ಪೋಷಕರಿಗೆ ತಿಳಿಯುತ್ತಿದ್ದಂತೆ ಮಾರನೆ ದಿನ ಪೋಷಕರು ಶಾಲೆಗೆ ಆಗಮಿಸಿ ರಂಪಾಟ ನಡೆಸಿದ್ದಾರೆ. ಶಾಲಾ ಆಡಳಿತ ಮಂಡಳಿ ವಿರುದ್ಧ ಆಕ್ರೋಶವ್ಯಕ್ತಪಡಿಸಿ, ಗಲಾಟೆಗೆ ಮುಂದಾಗುತ್ತಿದ್ದಂತೆ ಮಧ್ಯೆ ಪ್ರವೇಶಿಸಿದ ಪೊಲೀಸರು ಶಾಂತಗೊಳಿಸಿದ್ದು, ಠಾಣೆಯಲ್ಲಿ ದೂರು ನೀಡುವಂತೆ ತಿಳಿಸಿದ್ದಾರೆ.
ಈ ಬಗ್ಗೆ ಶಾಲಾ ಆಡಳಿತ ಮಂಡಳಿಯನ್ನು ಪ್ರಶ್ನಿಸಿದರೆ ಅವರು ಸಮರ್ಥನೆ ನೀಡುತ್ತಿದ್ದಾರೆ. ‘ಶಾಲೆಗೆ ಸೇರುವ ಮುಂಚೆಯೇ ನಾವು ಕೈಗಳಿಗೆ ಮೆಹಂದಿ, ರಾಖಿ ಕಟ್ಟದಂತೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಿದ್ದೇವೆ. ಅದನ್ನು ವಿದ್ಯಾರ್ಥಿಗಳು ಪಾಲಿಸದಿದ್ದಾಗ ನಾವು ಕ್ರಮ ಕೈಗೊಂಡಿದ್ದೇವೆ’ ಎಂಬ ಸಬೂಬು ನೀಡುತ್ತಾರೆ.