ಪಾಟ್ನಾ, ಸೆ.2: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಡಿಎನ್ಎ ಕುರಿತಂತೆ ಪ್ರಧಾನಿ ನರೇಂದ್ರ ಮೋದಿಯವರ ಟೀಕೆಯ ಬಳಿಕ ಇದೀಗ ಕೇಂದ್ರ ಸಚಿವ ರಾಜೀವ ಪ್ರತಾಪ್ ರೂಢಿ ಅವರು,ಆರ್ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್ ಜೊತೆ ಕೈ ಜೋಡಿಸಿದ ನಂತರ, ಕುಮಾರ್ ಡಿಎನ್ಎ ‘ಕೆಟ್ಟು ಹೋಗಿದೆ’ಎಂದು ಬುಧವಾರ ಇಲ್ಲಿ ಹೇಳುವ ಮೂಲಕ ಅಂತಹದೇ ವಿವಾದವೊಂದನ್ನು ಸೃಷ್ಟಿಸಿದ್ದಾರೆ.
ಲಾಲು ಜೊತೆ ಮೈತ್ರಿ ಮಾಡಿಕೊಂಡ ಬಳಿಕ ನಿತೀಶ್ ತನ್ನ ವಿವೇಚನೆಯನ್ನು ಕಳೆದುಕೊಂಡಿದ್ದಾರೆ ಎಂದೂ ಟೀಕಿಸಿದ ಅವರು, ಲಾಲು ಪ್ರಭಾವ ನಿತೀಶ್ ಮೇಲೆಯೂ ಬಿದ್ದಿದೆ. ಲಾಲು ಈ ಎಲ್ಲ ವರ್ಷಗಳಲ್ಲಿ ಮಾಡಿಕೊಂಡು ಬಂದಂತೆ ಬಿಹಾರದ ಮುಖ್ಯಮಂತ್ರಿಗಳೂ ಬಿಜೆಪಿಯ ವಿರುದ್ಧ ಅವರದೇ ಭಾಷೆಯನ್ನು ಬಳಸುತ್ತಿದ್ದಾರೆ ಎಂದು ಆರೋಪಿಸಿದರು.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ರೂಡಿ,ನೀವು(ನಿತೀಶ್) ನಮ್ಮಿಂದಿಗೆ(ಬಿಜೆಪಿ) ಇರುವವರೆಗೆ ನಿಮ್ಮ ಡಿಎನ್ಎನಲ್ಲಿ ಯಾವುದೇ ದೋಷವಿರಲಿಲ್ಲ. ನೀವು ಲಾಲು ಜೊತೆ ಮೈತ್ರಿ ಮಾಡಿಕೊಂಡ ನಂತರವೇ ನಿಮ್ಮ ಡಿಎನ್ಎ ಕೆಟ್ಟಿದೆ ಎಂದರು.
ತಾನು ಸ್ವಾತಂತ್ರ ಯೋಧರ ಕುಟುಂಬದಿಂದ ಬಂದವನು ಎಂದು ಪ್ರತಿಪಾದಿಸುವ ಮೂಲಕ ನಿತೀಶ್ ಪ್ರಧಾನಿ ಮೋದಿಯವರ ವಿರುದ್ಧ ನಡೆಸುತ್ತಿರುವ ದಾಳಿ ಕುರಿತಂತೆ ರೂಡಿ,ಅವರ ಕುಟುಂಬ ಮಾತ್ರವಲ್ಲ,ಅಂದು ದೇಶದ ಎಲ್ಲ 50 ಕೋಟಿ ಜನರೂ ಸ್ವಾತಂತ್ರಕ್ಕಾಗಿ ಹೋರಾಡಿದ್ದರು ಎಂದು ಕುಟುಕಿದರು. ನಿತೀಶ್ಗೆ ಬಹುಶಃ ಈ ದೇಶದ ಇತಿಹಾಸ ಮತ್ತು ಭೌಗೋಳಿಕತೆಯ ಅರಿವಿಲ್ಲ ಎಂದು ಟೀಕಿಸಿದರು.