ನವದೆಹಲಿ : ‘ಸರಳತೆ, ಏಕತೆ ಭಾರತದ ಶಕ್ತಿ. ಇಂಥ ದೇಶದಲ್ಲಿ ಜಾತೀಯತೆ ಹಾಗೂ ಕೋಮುವಾದಕ್ಕೆ ಅವಕಾಶವಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ನುಡಿದರು.
69ನೇ ಸ್ವಾತಂತ್ರೋತ್ಸವದ ಅಂಗವಾಗಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿರುವ ಕೆಂಪುಕೋಟೆಯ ಮೇಲೆ ತ್ರಿವರ್ಣ ಧ್ವಜ ಹಾರಿಸಿ ಅವರು ದೇಶವನ್ನುದ್ದೇಶಿಸಿ ಮಾತನಾಡಿದರು.
ಸುಮಾರು 90 ನಿಮಿಷಗಳ ಭಾಷಣದಲ್ಲಿ ಪ್ರಧಾನಿ ಅವರು ಯಾವುದೇ ಪ್ರಮುಖ ಯೋಜನೆಗಳನ್ನು ಪ್ರಕಟಿಸಲಿಲ್ಲ. ಬದಲಾಗಿ 125 ಕೋಟಿ ಭಾರತೀಯರ ಕನಸುಗಳು, ದೇಶದ ಶಕ್ತಿ, ಸರಳತೆ, ಏಕತೆ, ಬಡತನ, ಅಭಿವೃದ್ಧಿ, ಸ್ವಚ್ಛಭಾರತ ಯೋಜನೆ, ಒಂದು ಶ್ರೇಣಿ ಒಂದು ಪಿಂಚಣಿ… ಹೀಗೆ ವಿವಿಧ ವಿಷಯಗಳ ಕುರಿತು ಮಾತನಾಡಿದರು.
ಪ್ರಧಾನಿ ಮೋದಿ ಅವರ ಭಾಷಣದ ಪ್ರಮುಖಾಂಶಗಳು ಇಂತಿವೆ….
**ಇದು 125 ಕೋಟಿ ಭಾರತೀಯರ ಕನಸು, ಆಕಾಂಕ್ಷೆಗಳ ಭರವಸೆ ಬೆಳಗು
*ಸರಳತೆ ಹಾಗೂ ಏಕತೆ ಭಾರತದ ಬಲ. ಅದಕ್ಕೆ ಎಂದಿಗೂ ಚ್ಯುತಿ ಬರಬಾರದು
*ದೇಶದಲ್ಲಿ ಜಾತೀಯತೆ ಹಾಗೂ ಕೋಮುವಾದಕ್ಕೆ ಅವಕಾಶವಿಲ್ಲ
*ಸರ್ಕಾರದ 15 ತಿಂಗಳ ಆಡಳಿತಾವಧಿಯಲ್ಲಿ ಒಂದೇ ಒಂದು ರೂಪಾಯಿ ಭ್ರಷ್ಟಾಚಾರವೂ ಕೇಳಿ ಬಂದಿಲ್ಲ
*ಸ್ವತಂತ್ರ್ಯ ಸಿಕ್ಕು ದಶಕಗಳೇ ಉರುಳಿದರೂ ಈಗಲೂ ಸುಮಾರು 18, 500 ಹಳ್ಳಿಗಳಲ್ಲಿ ವಿದ್ಯುತ್ ಇಲ್ಲ. ಮುಂದಿನ 1000 ದಿನಗಳಲ್ಲಿ ನಾವು ವಿದ್ಯುತ್ ಒದಗಿಸುವ ವಾಗ್ದಾನ ನೀಡುತ್ತೇವೆ.
*ಕಳೆದ 34–40 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಎಲ್ಲಾ ವಿಭಾಗದ ಎಲ್ಲಾ ಪ್ರಕರಣಗಳಿಗೆ ನ್ಯಾಯ ಒದಗಿಸುತ್ತೇವೆ. ಒಂದು ಶ್ರೇಣಿ, ಒಂದು ಪಿಂಚಣಿ ಯೋಜನೆಗೆ ಅನುಷ್ಠಾನಕ್ಕೆ ನಾವು ಬದ್ಧರಾಗಿದ್ದೇವೆ. ಕೆಲವು ಅಡತಡೆಗಳಿದ್ದು ಅವುಗಳನ್ನು ನಿವಾರಿಸಲಾಗುವುದು
*ಕಳೆದ ಬಾರಿ ಕೆಂಪುಕೋಟೆಯ ಮೇಲೆ ನಾನು ಶೌಚಾಲಯ, ಸ್ವಚ್ಛತೆಯ ಬಗ್ಗೆ ಮಾತನಾಡಿದ್ದೆ. ಈಗೇನಾದರೂ ಸುಧಾರಣೆ
ಆಗಿದ್ದರೆ ಅದು ಸ್ವಚ್ಛತೆಯಡಿಗಿನ ಚಳವಳಿಯ ಫಲ. ದೇಶದ ಮಕ್ಕಳು ಸ್ವಚ್ಛ ಭಾರತ ಅಭಿಯಾನದ ಅತಿದೊಡ್ಡ ಲಾಂಛನಗಳು.
*ದೇಶದಲ್ಲಿ ಕಾರ್ಮಿಕರನ್ನು ನೋಡುವ ಶೈಲಿಯನ್ನು ನಾವು ಬದಲಿಸಿದ್ದೇವೆ. ಅದಕ್ಕಾಗಿ ಸರ್ಕಾರ ಶ್ರಮಮೇವ ಜಯತೆ ಯೋಜನೆಯನ್ನು ಜಾರಿಗೊಳಿಸಿದೆ.
*ಯಾರೂ ಬಡವರಾಗಿ ಇರಲು ಬಯಸುವುದಿಲ್ಲ. ಆದ್ದರಿಂದ ನಮ್ಮೆಲ್ಲ ಯೋಜನೆಗಳು ಬಡವರ ಕೇದ್ರೀಕೃತವಾಗಿರಬೇಕು. 2022ರ ವೇಳೆಗೆ ದೇಶದಲ್ಲಿ ಮನೆಗಳಿಲ್ಲ ಬಡವರು ಇರಬಾರದು. ಅದಕ್ಕಾಗಿ ಸರ್ಕಾರ ಕ್ರಮಕೈಗೊಳ್ಳಲಿದೆ
* ಅನಿಲ ಸಬ್ಸಡಿ ತೊರೆಯುವ ಯೋಜನೆಯ ಭಾಗವಾಗಿ 20 ಲಕ್ಷ ಜನರು ಸಬ್ಸಿಡಿ ತ್ಯಜಿಸಿದ್ದಾರೆ ಎಂದು ಹೆಮ್ಮೆಯಿಂದ ಹೇಳುವೆ
*ಸ್ಟಾರ್ಟ್ಅಪ್ನಲ್ಲಿ ನಾವು ಅಗ್ರಸ್ಥಾನಕ್ಕೆ ಏರಬೇಕು. ಉದ್ಯಮ ನಡೆಸಲು ಮುಂದಾಗುವ ಯುವಶಕ್ತಿಗೆ ಎಲ್ಲಾ ಬ್ಯಾಂಕುಗಳ ಎಲ್ಲಾ ಬ್ರ್ಯಾಂಚ್ಗಳೂ ಕಡ್ಡಾಯವಾಗಿ ಸಾಲ ನೀಡಬೇಕು