ಅಟ್ಟಾರಿ: ಪಾಕಿಸ್ತಾನ ಸ್ವಾತಂತ್ರ್ಯ ದಿನಾಚರಣೆಯಂದು ಗಡಿ ಪ್ರದೇಶದಲ್ಲಿರುವ ಉಭಯ ದೇಶಗಳ ಯೋಧರು ಸಿಹಿ ವಿನಿಮಯ ಮಾಡಿಕೊಳ್ಳುವುದು ವಾಡಿಕೆಯಾಗಿತ್ತು. ಆದರೆ ಈ ವರ್ಷ ಪಾಕಿಸ್ತಾನ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಗಡಿ ಪ್ರದೇಶದಲ್ಲಿ ಸಿಹಿ ವಿನಿಮಯ ನಡೆದಿಲ್ಲ.
ಪಂಜಾಬ್ ನ ಗುರ್ದಾಸ್ ಪುರ ಹಾಗೂ ಜಮ್ಮು-ಕಾಶ್ಮೀರದಲ್ಲಿ ಪಾಕಿಸ್ತಾನದ ಉಗ್ರರು ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಉಭಯ ದೇಶಗಳ ಸೌಹಾರ್ದಯುತ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸಿಹಿ ವಿನಿಮಯ ಮಾಡಿಕೊಳ್ಳುವ ವಾಡಿಕೆ ಮುರಿದುಬಿದ್ದಿದೆ.
ಪಾಕಿಸ್ತಾನ ಸ್ವಾತಂತ್ರ್ಯ ದಿನಾಚರಣೆಯಂದು ಪರಸ್ಪರ ಸಿಹಿ ಹಂಚಬಾರದು ಎಂದು ಕಳೆದ ವಾರ ನಡೆದಿದ್ದ ಸೇನಾ ಸಭೆಯಲ್ಲಿ ಉಭಯ ದೇಶಗಳ ಗಡಿ ಕಮಾಂಡೆಂಟ್ ಗಳು ನಿರ್ಧರಿಸಿದ್ದರು. ಈ ವರ್ಷದ ರಂಜಾನ್ ವೇಳೆ ಭಾರತೀಯ ಯೋಧರು ನೀಡಿದ್ದ ಸಿಹಿಯನ್ನು ಪಾಕಿಸ್ತಾನ ತಿರಸ್ಕರಿಸಿದ್ದ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆಯಂದು ಪಾಕಿಸ್ತಾನದ ರೇಂಜರ್ ಗಳು ಭಾರತಕ್ಕೆ ಹಾಗೂ ಭಾರತೀಯ ಸ್ವಾತಂತ್ರ್ಯ ದಿನಾಚರಣೆಯಂದು ಇಲ್ಲಿನ ರೇಂಜರ್ ಗಳು ಪಾಕಿಸ್ತಾನಕ್ಕೆ ಸಿಹಿ ಹಂಚುವ ಪದ್ಧತಿ ನಡೆದುಬಂದಿತ್ತು. ಮಾರ್ಚ್ 23 ರಂದು ನಡೆದ ಪಾಕಿಸ್ತಾನ ದಿನಾಚರಣೆಯಂದು ಭಾರತ ಸಿಹಿ ಕಳಿಸಿತ್ತು.