ದೀನಾನಗರ್: ಉಗ್ರರ ದಾಳಿಗೆ ತುತ್ತಾಗುವಷ್ಟರಲ್ಲಿ ಬಸ್ ಚಾಲಕನ ಜಾಗರೂಕತೆ ಮತ್ತು ಶೌರ್ಯದಿಂದಾಗಿ ಅನೇಕ ಜನರ ಪ್ರಾಣ ಉಳಿದಿಕೊಂಡಿರುವ ಘಟನೆ ಪಂಜಾಬ್ ನಲ್ಲಿ ನಡೆದಿದೆ.
ಪಂಜಾಬ್ ನಲ್ಲಿ ಉಗ್ರರು ದಾಳಿ ನಡೆಸುವ ವೇಳೆ ಶೌರ್ಯ ಮೆರೆದ ಬಸ್ ಚಾಲಕ ನಾನಕ್ ಚಂದ್ 75 ಪ್ರಯಾಣಿಕರ ಪ್ರಾಣ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾನೆ.
ಇಂದು ಪಂಜಾಬ್ ನಲ್ಲಿ ದಾಳಿ ನಡೆಸಿದ ಉಗ್ರರು ಸಮೀಪದಲ್ಲಿ ಬರುತ್ತಿದ್ದ ಬಸ್ ಮೇಲೆ ಗುಂಡು ಹಾರಿಸಿದ್ದಾರೆ. ಆದರೆ, ಉಗ್ರರ ದಾಳಿಗೆ ಹೆದರದ ಚಾಲಕ ಬಸ್ ನಿಲ್ಲಿಸದೇ ಉಗ್ರರ ಮುಂದೆಯೇ ವೇಗವಾಗಿ ಬಸ್ ಚಲಾಯಿಸಿ ಹೋಗಿದ್ದಾನೆ.
ಈ ವೇಳೆ ಉಗ್ರರು ಬಸ್ ತಮ್ಮ ಮೇಲೆ ಬರುತ್ತದೆ ಎಂದು ತಿಳಿದು ಪಕ್ಕಕ್ಕೆ ಸರಿದು ಗುಂಡು ಹಾರಿಸಿದ್ದಾರೆ. ತಕ್ಷಣ ಚಾಲಕ ಬಸ್ ನ ದಿಕ್ಕು ಬದಲಾಯಿಸಿ ವೇಗವಾಗಿ ಬಸ್ ಚಲಾಯಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಅಲ್ಲದೇ, ಅಲ್ಲಿಂದ ನೇರವಾಗಿ ಆಸ್ಪತ್ರೆಗೆ ತೆರಳಿದ ಚಾಲಕ ಗಾಯಗೊಂಡ ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಿ, ದಾಳಿಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಘಟನೆ ಬೆಳಿಗ್ಗೆ ಸುಮಾರು 5.30ರ ಸಮಯದಲ್ಲಿ ನಡೆದಿದೆ. ಬಸ್ ನಲ್ಲಿ ಸುಮಾರು 75 ಪ್ರಯಾಣಿಕರಿದ್ದರು. ಅವರ ಪ್ರಾಣ ರಕ್ಷಣೆ ಮಾಡುವುದು ನನ್ನ ಗುರಿಯಾಗಿತ್ತು. ಈ ಹಿನ್ನಲೆಯಲ್ಲಿ ಉಗ್ರರು ದಾಳಿ ಮಾಡಿದರು ನಾನು ಬಸ್ ನಿಲ್ಲಿಸದೇ ವೇಗವಾಗಿ ಮುನ್ನುಗ್ಗಿದೆ ಎಂದು ನಾನಕ್ ಚಂದ್ ಹೇಳಿದ್ದಾರೆ.
ಚಾಲಕನ ಚಾಗುರೂಕತೆಯಿಂದಾಗಿ ಅನೇಕ ಜನರ ಪ್ರಾಣ ಉಳಿದಿದೆ. ಇಲ್ಲವಾದರೆ, ಇಂದು ನಡೆದ ಉಗ್ರರ ದಾಳಿಯಲ್ಲಿ 75 ಜನರು ಟಾರ್ಗೆಟ್ ಆಗುತ್ತಿದ್ದರು ಎಂದು ಪಂಜಾಬ್ ನಲ್ಲಿ ರೋಡ್ ವೇಸ್ ಜನರಲ್ ಮ್ಯಾನೇಜರ್ ಹೇಳಿದ್ದಾರೆ.
ಹಳ್ಳಿ ಜನರ ಜಾಗೂರಕತೆಯಿಂದಾಗಿ ಮತ್ತೊಂದು ದೊಡ್ಡ ದುರಂತವೊಂದು ತಪ್ಪಿದೆ. ಉಗ್ರರು ಪರಮಾನಂದ ರೈಲ್ವೆ ನಿಲ್ದಾಣದ ಬಳಿ 5 ಬಾಂಬ್ ಗಳನ್ನು ಇಟ್ಟಿದ್ದರು. ಇದನ್ನು ಗುರುತಿಸಿದ ಜನರು ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಬಾಂಬ್ ನಿಷ್ಕ್ರಿಯಗೊಳಿಸಿದ್ದಾರೆ. ಈ ಮೂಲಕ ದೊಡ್ಡ ದುರಂತ ತಪ್ಪಿದಂತಾಗಿದೆ.