ಹೈದರಾಬಾದ್: ಜುಲೈ 22 ರಂದು ನಡೆದಿದ್ದ ಭೀಕರ ಕಾರು ಅಪಘಾತದಲ್ಲಿ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡಿದ್ದ ಎಂಟು ವರ್ಷದ ಬಾಲಕಿಯ ಅಂಗಾಂಗ ಹಾಗೂ ದೇಹವನ್ನು ದಾನ ಮಾಡುವ ಮೂಲಕ ಕುಟುಂಬಸ್ಥರು ಸಾವಿನ ನೋವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಇದರಿಂದಾಗಿ ನಾಲ್ಕು ಮಂದಿಗೆ ಜೀವದಾನ ನೀಡಿದಂತಾಗಿದೆ.
ಗೋದಾವರಿ ಪುಷ್ಕರಲು ನೋಡಿಕೊಂಡು ತನ್ನ ಕುಟುಂಬಸ್ಥರೊಡನೆ ಕಾರಿನಲ್ಲಿ ಬರುತ್ತಿದ್ದ ಮೂರನೇ ತರಗತಿಯಲ್ಲಿ ಓದುತ್ತಿದ್ದ ಎಂಟು ವರ್ಷದ ಬಾಲಕಿ ಮನಸ್ವಿನಿ ಅಪಘಾತ ಸಂಭವಿಸಿದ ವೇಳೆ ತೀವ್ರವಾಗಿ ಗಾಯಗೊಂಡಿದ್ದು, ಆಕೆಯ ಮೆದುಳು ನಿಷ್ಕಿಯಗೊಂಡಿತ್ತು. ಈ ಅಪಘಾತದಲ್ಲಿ ಮನಸ್ವಿನಿಯ ತಂದೆ ಗೋಪಿನಾಥ್ ಸ್ಥಳದಲ್ಲೇ ಮೃತಪಟ್ಟಿದ್ದರೆ ಆಕೆಯ ತಾಯಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.
ಬಾಲಕಿ ಮನಸ್ವಿನಿಯ ಮೆದುಳು ನಿಷ್ಕ್ರಿಯಗೊಂಡಿರುವುದನ್ನು ಕುಟುಂಬಸ್ಥರಿಗೆ ವೈದ್ಯರು ತಿಳಿಸಿದ್ದು, ಈ ವೇಳೆ ಆಕೆಯ ಲಿವರ್, ಎರಡು ಕಿಡ್ನಿ ಹಾಗೂ ಹೃದಯವನ್ನು ದಾನ ಮಾಡಲು ಕುಟುಂಬಸ್ಥರು ತೀರ್ಮಾನಿಸಿದರಲ್ಲದೇ ಆಕೆಯ ದೇಹವನ್ನು ವೈದ್ಯಕೀಯ ಕಾಲೇಜಿಗೆ ನೀಡುವ ಮೂಲಕ ಸಾವಿನ ನೋವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಬಾಲಕಿಯ ಅಂಗಾಂಗಳ ದಾನದಿಂದಾಗಿ ನಾಲ್ಕು ಮಂದಿಗೆ ಈಗ ಜೀವದಾನ ದೊರೆಕಿದಂತಾಗಿದೆ.