ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯದಿಂದ ಪ್ರತಿದಿನ 80 ಮಂದಿ ಸಾವಿಗೀಡಾಗುತ್ತಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಇತ್ತೀಚೆಗೆ ಬಿಡುಗಡೆಯಾದ ಅಂತಾರಾಷ್ಟ್ರೀಯ ಅಧ್ಯಯನದಲ್ಲಿ ಈ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಪರಿಸರ ಸಚಿವ ಪ್ರಕಾಶ್ ಜಾವ್ಡೇಕರ್ ರಾಜ್ಯಸಭೆಯಲ್ಲಿ ಈ ವಿಷಯ ತಿಳಿಸಿದ್ದಾರೆ.
ಕಲುಷಿತ ಗಾಳಿಯ ಸೇವನೆಯಿಂದಾಗಿ ಉಸಿರಾಟದ ಮೂಲಕ ದೇಹಕ್ಕೆ ವಿಷಕಾರಿ ಅಂಶಗಳು ಸೇರುತ್ತವೆ. ಹೀಗಾಗಿ ಹಲವು ಮಂದಿ ಅಕಾಲಿಕ ಮರಣಕ್ಕೆ ತುತ್ತಾಗುತ್ತಾರೆ ಎಂದು ತಮ್ಮ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಇತ್ತೀಚೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದ ಸಮೀಕ್ಷೆ ತನ್ನ ವರದಿಯಲ್ಲಿ ಇದನ್ನು ಬಹಿರಂಗ ಪಡಿಸಿದೆ ಎಂದ ಅವರು, ದೆಹಲಿಯಲ್ಲಿ ಸರ್ಕಾರ ಎರಡು ರೀತಿಯ ಸಮೀಕ್ಷೆ ನಡೆಸಿತ್ತು.
2002-2005 ರಲ್ಲಿ ವಾಯುಮಾಲಿನ್ಯದಿಂದ ಮಾನವನ ಮೇಲಾಗುತ್ತಿರುವ ಪರಿಣಾಮ ಹಾಗೂ ದೆಹಲಿ ಮಕ್ಕಳಲ್ಲಿ ವಾಯಮಾಲಿನ್ಯದಿಂದಾಗುವ ದುಷ್ಪರಿಣಾಮ ಹಾಗೂ ಶ್ವಾಸಕೋಶದ ಚಟುವಟಿಕೆಗಳ ಬಗ್ಗೆ ಅಧ್ಯಯನ ನಡೆಸಲಾಯಿತು ಎಂದು ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ.
ಇನ್ನು ವಾಯು ಮಾಲಿನ್ಯದಿಂದ ದೇಹದ ರೋಗ ನಿರೋಧಕ ಶಕ್ತಿ ಕುಗ್ಗಿಸುವುದರ ಜೊತೆಗೆ ಹಲವು ರೀತಿಯ ರೋಗಗಳಿಗೆ ರಹದಾರಿ ಯಾಗುತ್ತದೆ. ಶ್ವಾಸಕೋಶ ಸಂಬಂಧಿ ಕಾಯಿಲೆಗಳ ಜೊತೆಗೆ ಹೃದಯ ರೋಗಗಳಿಗೂ ನಾಗರಿಕರು ತುತ್ತಾಗುತ್ತಾರೆ ಎಂದು ಪ್ರಕಾಶಾ ಜಾವ್ಡೇಕರ್ ತಿಳಿಸಿದ್ದಾರೆ.