ನವದೆಹಲಿ: ನಕಲಿ ಪದವಿ ಪ್ರಮಾಣ ಪತ್ರ ಪಡೆದ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ದೆಹಲಿ ಮಾಜಿ ಕಾನೂನು ಸಚಿವ ಜಿತೇಂದ್ರ ಸಿಂಗ್ ತೋಮರ್ ಅವರಿಗೆ ಗುರುವಾರ ದೆಹಲಿ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ತೋಮರ್ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಅಡಿಷನಲ್ ಸೆಶನ್ಸ್ ಜಡ್ಜ್ ವಿಮಲ್ ಕುಮಾರ್ ಯಾದವ್ ಅವರು, ವೈಯಕ್ತಿಕವಾಗಿ 50 ಸಾವಿರ ರುಪಾಯಿ ಬಾಂಡ್ ಮತ್ತು ಅಷ್ಟೇ ಮೊತ್ತದ ಶ್ಯೂರಿಟಿ ಮೇಲೆ ಜಾಮೀನು ನೀಡಿದ್ದಾರೆ.
ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆ ವಿದೇಶಕ್ಕೆ ತೆರಳದಂತೆ ಹಾಗೂ ತನಿಖೆಗೆ ಸಹಕಾರ ನೀಡಬೇಕು ಎಂದು ದೆಹಲಿ ಮಾಜಿ ಸಚಿವರಿಗೆ ಕೋರ್ಟ್ ಸೂಚಿಸಿದೆ.
ನಕಲು, ವಂಚನೆ ಮತ್ತು ಅಪರಾಧ ಪಿತೂರಿ ಆರೋಪಗಳನ್ನು ಹೇರಿ ತೋಮರ್ ಅವರನ್ನು ದೆಹಲಿ ಪೊಲೀಸರು ಜೂನ್ ೯ ರಂದು ಬಂಧಿಸಿದ್ದರು.