ನವದೆಹಲಿ: ನಕಲಿ ದಾಖಲೆ ಸೃಷ್ಟಿಸಿ ನೇಪಾಳ ಮೂಲದ ಏಳು ಮಂದಿ ಯುವತಿಯರನ್ನು ದುಬೈಗೆ ಸಾಗಿಸಲು ನೆರವಾಗಿದ್ದ ಆರೋಪದ ಮೇಲೆ ಇಬ್ಬರು ಏರ್ ಇಂಡಿಯಾ ಸಿಬ್ಬಂದಿಗಳನ್ನು ಬಂಧಿಸಲಾಗಿದೆ.
ನವದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಡ್ಯೂಟಿ ಮ್ಯಾನೇಜರ್ ಕಪಿಲ್ ಹಾಗೂ ಸಾವರ್ಜನಿಕ ಸಂಪರ್ಕ ವಿಭಾಗದ ಮನೀಷ್ ಬಂಧಿತರಾಗಿದ್ದು, ಜೊತೆಗೆ ದುಬೈಗೆ ತೆರಳಲು ಮುಂದಾಗಿದ್ದ ನೇಪಾಳ ಮೂಲದ ಪೂಜಾ ತಮಾಂಗ್, ಮಾಲತಿ ರೈ, ಲಕ್ಷ್ಮೀ ರೈ, ಕೃಷ್ಣಾ ದೇವಿ, ಉಮಾ ಬುಜೇಲ್, ಶರ್ಮಿಳಾ ಥಾಪಾ ಹಾಗೂ ಕುಮಾರಿ ಎಂಬವರನ್ನು ವಶಕ್ಕೆ ಪಡೆಯಲಾಗಿದೆ.
ಅಹ್ಮದಾಬಾದಿನಿಂದ ಬಂದಿದ್ದ ಇವರುಗಳು ತಾವು ಕಠ್ಮಂಡುವಿನಿಂದ ಬಂದು ದುಬೈಗೆ ತೆರಳುತ್ತಿರುವುದಾಗಿ ಅಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿದ್ದು, ಅನುಮಾನ ಬಂದು ಪರಿಶೀಲಿಸಿದ ವೇಳೆ ಮಾನವ ಕಳ್ಳಸಾಗಣೆ ಮಾಡುತ್ತಿರುವ ಅಂಶ ಪತ್ತೆಯಾಗಿತ್ತು. ಸೋಮವಾರ ರಾತ್ರಿ ಮೂವರು ಯುವತಿಯರನ್ನು ವಶಕ್ಕೆ ಪಡೆದಿದ್ದ ಭದ್ರತಾಧಿಕಾರಿಗಳು ಮಂಗಳವಾರ ಬೆಳಿಗ್ಗೆ ಮತ್ತೆ ನಾಲ್ವರನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ವಿಚಾರಣೆ ವೇಳೆ ಏರ್ ಇಂಡಿಯಾದ ಇಬ್ಬರು ಸಿಬ್ಬಂದಿಗಳು ಸಹಕರಿಸಿದ್ದ ಮಾಹಿತಿ ತಿಳಿದುಬಂದ ಬಳಿಕ ಅವರುಗಳನ್ನೂ ಬಂಧನಕ್ಕೊಳಪಡಿಸಲಾಗಿದೆ.