ಚಂಡೀಗಢ: ಶ್ರೀನಗರದಲ್ಲಿ ಪಾಕಿಸ್ತಾನದ ಹಾಗೂ ಇಸಿಸ್ ಧ್ವಜ ಪ್ರದರ್ಶಿಸಿದವರ ವಿರುದ್ಧ ಹಾಗೂ ಪದೇ ಪದೇ ಕದನ ವಿರಾಮ ಉಲ್ಲಂಘಿಸುವುದರ ವಿರುದ್ಧ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮುಫ್ತಿ ಮೊಹ್ಮದ್ ಸಯೀದ್ ಅವರಿಗೆ ಸ್ಟ್ರಾಂಗ್ ಮ್ಯಾನ್ ಪ್ರಧಾನಿ ನರೇಂದ್ರ ಮೋದಿ ಅವರು ಸೂಚಿಸಲಿ ಎಂದು ನಿವೃತ್ತ ಲೆಫ್ಟಿನೆಂಟ್ ಜನರಲ್ ಪಿ.ಎನ್.ಹೂನ್ ಶನಿವಾರ ಹೇಳಿದ್ದಾರೆ.
‘ಈ ವಿಷಯವನ್ನು ಈಗ ಏಕೆ ಗಂಭೀರವಾಗಿ ಪರಿಗಣಿಸಬಾರದು? ಹಲವು ವರ್ಷಗಳಿಂದ ಇಂತಹ ಪುಂಡಾಟಿಕೆ ನಡೆಸುತ್ತಿದ್ದಾರೆ. ಅವರು ಯಾರು? ಅವರು ಬೇರೆ ಯಾರೂ ಅಲ್ಲ ಪಿಡಿಪಿಯ ಸಹಾನುಭೂತಿಯುಳ್ಳವರು. ಹೀಗಾಗಿ ಪ್ರತ್ಯೇಕವಾದಿಗಳನ್ನು ನಿಯಂತ್ರಿಸುವುದು ಜಮ್ಮು ಕಾಶ್ಮೀರ ಮುಖ್ಯಮಂತ್ರಿಯ ಜವಾಬ್ದಾರಿ. ಅಲ್ಲಿ ಪಿಡಿಪಿ ಏನು ಮಾಡುತ್ತಿದೆ’ ಎಂದು ಹೂನ್ ಪ್ರಶ್ನಿಸಿದ್ದಾರೆ.
‘ನಮ್ಮ ಪ್ರಧಾನಿ ಒಬ್ಬ ಕಠಿಣ ವ್ಯಕ್ತಿಯಾಗಿದ್ದು, ಅವರು ಪ್ರತ್ಯೇಕವಾದಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ, ಇಲ್ಲದಿದ್ದರೆ ಹೊರ ಹೋಗಿ’ ಎಂದು ಮುಪ್ತಿಗೆ ಸೂಚಿಸಬೇಕು ಎಂದಿದ್ದಾರೆ.
ಇಂದು ಮತ್ತೆ ಗಡಿಯಲ್ಲಿ ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ದಾಳಿ ಮಾಡಿದೆ. ಕಳೆದ ಮೂರು ದಿನಗಳಲ್ಲಿ ಪಾಕಿಸ್ತಾನ ಐದನೇ ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದೆ.
ಪ್ರತ್ಯೇಕವಾದಿ ನಾಯಕ ಸೈಯದ್ ಅಲಿ ಗಿಲಾನಿಯನ್ನು ಗೃಹ ಬಂಧನದಲ್ಲಿರಿಸಲಾಗಿದೆ. ಅದನ್ನು ಅವರ ಬೆಂಬಲಿಗರು ಇಸಿಸ್ ಮತ್ತು ಪಾಕಿಸ್ತಾನ ಧ್ವಜ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ್ದರು.