ನವದೆಹಲಿ, ಜು.6-ಮಗುವಿನ ಸಂರಕ್ಷಣೆ ವಿಷಯದಲ್ಲಿ ಅವಿವಾಹಿತ ತಾಯಿ ತಂದೆಯ ಸಹಮತಕ್ಕೆ ಕಾಯುವ ಅಗತ್ಯವಿಲ್ಲ ಎಂಬ ಮಹತ್ವದ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯ ಇಂದು ಎತ್ತಿ ಹಿಡಿದಿದೆ. ತನ್ನ ಮಗುವಿನ ಸಂರಕ್ಷಣೆ ವಿಷಯಕ್ಕೆ ಸಂಬಂಧಿಸಿದಂತೆ ಅವಿವಾಹಿತ ತಾಯಿಯೊಬ್ಬಳು ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲಿಸಿದ
ನ್ಯಾಯಾಧೀಶ ವಿಕ್ರಮ್ ಜಿತ್ಸೇನ್, ಅವಿವಾಹಿತ ತಾಯಿಗೆ ಮಗುವಿನ ಗಾರ್ಡಿಯನ್ಷಿಪ್ ಕೊಡುವಾಗ, ಮಗು ಹುಟ್ಟಿಗೆ ಕಾರಣನಾದ ತಂದೆಯ ಅನುಮತಿಗೆ ಕಾಯುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅವಿವಾಹಿತ ತಾಯಿಗೆ ಗಾರ್ಡಿಯನ್ಷಿಪ್ ಕೊಡುವ ವಿಷಯದಲ್ಲಿ ತಂದೆಯ ಅನುಮತಿ ಪಡೆಯದೆ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ನ್ಯಾಯಾಲಯ ಮರು ಪರಿಶೀಲನೆ ನಡೆಸಬೇಕು ಎಂದು ಅವರು ಹೇಳಿದ್ದಾರೆ.
ಹೈಕೋರ್ಟ್ ಸೇರಿದಂತೆ ಎಲ್ಲ ಕೆಳ ನ್ಯಾಯಾಲಯಗಳಿಗೂ ಈ ಬಗ್ಗೆ ಸೂಚನೆ ನೀಡಿರುವ ನ್ಯಾಯಮೂರ್ತಿಗಳು, ನನ್ನ ಮುಂದೆ ಬಂದಿರುವ ಈ ಪ್ರಕರಣದಲ್ಲಿ ನಾನು ಇದೇ ರೀತಿ ನಿರ್ಧಾರ ತಳೆಯುತ್ತೇನೆ ಎಂದು ಹೇಳಿದ್ದಾರೆ.