ಶ್ರೀನಗರ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ಆಕಸ್ಮಿಕವಾಗಿ ಭಾರತದ ಗಡಿ ಪ್ರವೇಶಿಸಿದ್ದ 11 ವರ್ಷದ ಬಾಲಕನನ್ನು ಭಾರತೀಯ ಸೇನೆ ಮತ್ತೆ ಪಾಕಿಸ್ತಾನಕ್ಕೆ ಹಸ್ತಾಂತರಿಸಿದೆ.
ಬಾಲಕ ಸಮೀರ್ ಕಯಾನಿಯನ್ನು ಬರಿಗೈಲಿ ಕಳುಹಿಸಲು ಒಪ್ಪದ ಭಾರತೀಯ ಸೇನಾಧಿಕಾರಿಗಳು ಆತನಿಗೆ ಸಿಹಿತಿಂಡಿ ಮತ್ತು ಹೊಸ ಬಟ್ಟೆಗಳೊಂದಿಗೆ ಪಾಕಿಸ್ತಾನಕ್ಕೆ ಕಳುಹಿಸಿದ್ದಾರೆ.
ಕಳೆದ ಗುರುವಾರ ಪಾಕ್ ಆಕ್ರಮಿತ ಕಾಶ್ಮೀರದ ಅತ್ಮುಕುಮ್ನ ಪಾಸ್ವಾ ಪ್ರದೇಶದಿಂದ ಸಮೀರ್ ಕಯಾನಿ ಆಕಸ್ಮಿಕವಾಗಿ ಭಾರತದ ಗಡಿ ಪ್ರವೇಶಿಸಿದರಿಂದ ಬಾಲಕನನ್ನು ಭದ್ರತಾ ಸಿಬ್ಬಂದಿ ಬಂಧಿಸಿದ್ದರು. ನಂತರ ಭಾರತೀಯ ಸೇನಾಧಿಕಾರಿಗಳು ಬಾಲಕನ ಬಂಧನ, ಯೋಗಕ್ಷೇಮದ ಕುರಿತಾಗಿ ಪಾಕಿಸ್ತಾನ ಸೇನೆಗೆ ಕ್ಷಿಪ್ರವಾಗಿ ಹಾಟ್ಲೈನ್ ಸಂದೇಶ ಕಳುಹಿಸಿ, ಆತನನ್ನು ಮರಳಿಸುವ ನಿಟ್ಟಿನಲ್ಲಿ ಧ್ವಜ ಸಮಾವೇಶ ಏರ್ಪಡಿಸಲು ಸಂದೇಶ ರವಾನಿಸಿದ್ದರು.
‘ತೀತ್ವಾಲ್ ಕ್ರಾಸಿಂಗ್ ಪಾಯಿಂಟ್ನಲ್ಲಿ ನಡೆದ ಧ್ವಜ ಸಮಾವೇಶದಲ್ಲಿ ಪಾಕಿಸ್ತಾನದ ಪ್ರತಿನಿಧಿಗಳಿಗೆ ಬಾಲಕನನ್ನು ಹಸ್ತಾಂತರಿಸಲಾಗಿದ್ದು, ಬಾಲಕನಿಗೆ ಹೊಸಬಟ್ಟೆ ಮತ್ತು ಆತನ ಮನೆಯವರಿಗೆ ಸಿಹಿ ತಿಂಡಿಯನ್ನು ನೀಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.