ನಿಗೂಢ ಸಾವು ಪ್ರಜಾಪ್ರಭುತ್ವದ ನಂಬಿಕೆಯನ್ನೇ ಅಲುಗಾಡಿಸಿದೆ| ಪ್ರಧಾನಿ ಮೋದಿ ಪ್ರತಿಕ್ರಿಯಿಸಲಿ
ಭೋಪಾಲ್: ಮಧ್ಯಪ್ರದೇಶದಲ್ಲಿ ನಡೆದಿರುವ ವ್ಯಾಪಂ ಪರೀಕ್ಷಾ ಹಗರಣ ಏಷ್ಯಾದಲ್ಲೇ ಬಹುದೊಡ್ಡದು ಎಂದು ಕಾಂಗ್ರೆಸ್ ಆರೋಪಿಸಿದೆ. ವ್ಯಾಪಂ ಹಗರಣದ ತನಿಖೆಯನ್ನು ಸಿಬಿಐ ಗೆ ವಹಿಸಬೇಕೆಂದು ಪಟ್ಟು ಹಿಡಿರುವ ಕಾಂಗ್ರೆಸ್ ನಾಯಕರು ಮೋದಿ ಮೌನದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಗರಣದ ಕುರಿತು ಮೌನ ವಹಿಸಿರುವ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ಕೆ.ಕೆ ಮಿಶ್ರಾ ವಾಗ್ದಾಳಿ ನಡೆಸಿದ್ದು ಹಗರಣದ ಬಗ್ಗೆ ವರದಿ ಮಾಡಲು ಬಂದಿದ್ದ ಪತ್ರಕರ್ತ ಸಾವನ್ನಪ್ಪಿರುವುದು ಪ್ರಜಾಪ್ರಭುತ್ವದ ಮೇಲಿನ ನಂಬಿಕೆಯನ್ನು ಅಲುಗಾಡಿಸಿದೆ ಎಂದು ಹೇಳಿದ್ದಾರೆ.
ಮಧ್ಯಪ್ರದೇಶ ವೃತ್ತಿಪರ ಶಿಕ್ಷಣ ಮಂಡಳಿ (ವ್ಯಾಪಂ) ನೇಮಕಾತಿ ಹಗರಣದ ಕುರಿತು ವರದಿ ಮಾಡುತ್ತಿದ್ದ ಪತ್ರಕರ್ತರೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಇದು ದೇಶದ ಪ್ರಜಾಪ್ರಭುತ್ವದ ಮೇಲಿನ ನಂಬಿಕೆಯನ್ನು ಅಲುಗಾಡಿಸಿದೆ ಎಂದು ಮಿಶ್ರಾ ಆರೋಪಿಸಿದ್ದಾರೆ.
ಈ ಹಗರಣದ ಏಷ್ಯಾದಲ್ಲೇ ದೊಡ್ಡ ಹಗರಣವಾಗಿದ್ದು ಇದರಲ್ಲಿ ರಾಜ್ಯಪಾಲ, ರಾಜ್ಯಪಾಲರ ಮಕ್ಕಳು ಹಲವು ಐ.ಎ.ಎಸ್ ಹಾಗೂ ಐಪಿಎಸ್ ಅಧಿಕಾರಿಗಳು ಭಾಗಿಯಾಗಿದ್ದು ಕೆಲವರು ಜೈಲು ಸೇರಿದ್ದಾರೆ. ಆದ್ದರಿಂದ ಆತಂಕಕಾರಿ ವಾತಾವರಣ ನಿರ್ಮಾಣವಾಗಿದ್ದು ಪತ್ರಕರ್ತನ ನಿಗೂಢ ಸಾವು ಹಾಗೂ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ. ಪತ್ರಕರ್ತರು ಪ್ರಜಾಪ್ರಭುತ್ವದ ಮುಖ್ಯ ಭಾಗ. ಅವರ ಮೇಲೆ ದಾಳಿ ನಡೆದರೆ ಅದು ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆದಂತೆ ಎಂದು ಕಾಂಗ್ರೆಸ್ ಹೇಳಿದೆ.