ಮುಂಬಯಿ: ದಿನೇದಿನೆ ಮಾನವೀಯ ಸಂಬಂಧಗಳು ಕಡಿಮೆಯಾಗುತ್ತಿರುವುದು ಹಾಗೂ ಪ್ರದರ್ಶನ ರತಿ ಮತ್ತು ಆತ್ಮ ವ್ಯಾಮೋಹಕ್ಕೆ ಎಲ್ಲರೂ ಒಳಗಾಗುತ್ತಿರುವುದರ ಬಗ್ಗೆ ಹಿರಿಯ ನಟ ಅಮಿತಾಭ್ ಬಚ್ಚನ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗಷ್ಟೇ ತಮ್ಮ ಸ್ನೇಹಿತನೊಬ್ಬನ ಅಂತಿಮ ಸಂಸ್ಕಾರಕ್ಕೆಂದು ಅಮಿತಾಭ್ ದಿಲ್ಲಿಗೆ ತೆರಳಿದ್ದರು. ಅಲ್ಲಿ ಕೆಲವರು ತಮ್ಮೊಂದಿಗೆ ಸೆಲ್ಫಿ ತೆಗೆಸಿಕೊಳ್ಳಲು ಮುಗಿಬಿದ್ದಿದ್ದನ್ನು ಕಂಡು ದಿಗ್ಬ್ರಮೆಗೊಂಡರು.
ಸೆಲ್ಫಿ ಪ್ರವೃತ್ತಿ ಮಿತಿ ಮೀರಿದರೆ ಅದರಿಂದ ಮಾನವ ಸಂಬಂಧಗಳ ಸೂಕ್ಷತೆಯೇ ಮರೆಯಾಗುವ ಅಪಾಯವಿದೆ ಎಂದೂ ಎಚ್ಚರಿಸಿದ್ದಾರೆ.
71 ವರ್ಷದ ಹಿರಿಯ ಅಮಿತಾಭ್ ತಮ್ಮ ಫೇಸ್ಬುಕ್ನ ಖಾತೆಯಲ್ಲಿ ಈ ಸಂಬಂಧ ಕಾಮೆಂಟ್ ಮಾಡಿದ್ದು, ಪ್ರದರ್ಶನ ರತಿ ಇರುವವರಿಗೆ ಬದುಕಿರುವವರು ಮತ್ತು ಸತ್ತವರ ನಡುವಿನ ವ್ಯತ್ಯಾಸವಾಗಲಿ, ಗೌರವವಾಗಲಿ ಇಲ್ಲ ಎಂದು ಹತಾಶೆ ವ್ಯಕ್ತಪಡಿಸಿದ್ದಾರೆ.
”ನಾನು ನನ್ನ ಪ್ರಿಯ ಸ್ನೆಹಿತನ ಹಠಾತ್ ನಿಧನದ ಸುದ್ದಿ ಕೇಳಿ ದಿಲ್ಲಿಗೆ ಧಾವಿಸಿದ್ದೆ. ಅಲ್ಲಿನ ಸ್ಮಶಾನದಲ್ಲಿ ಜನ ಹರಟೆ ಹೊಡೆಯುತ್ತಿದ್ದುದನ್ನು ಕಂಡೆ. ಕೆಲವರಂತೂ ನನ್ನ ಸುತ್ತ ನೆರೆದು ಮೊಬೈಲ್ನಲ್ಲಿ ಫೋಟೋ ತೆಗೆಯುವುದು, ಸೆಲ್ಫಿ ತೆಗೆಯುವುದು ಮಂತಾದ ಕುಚೇಷ್ಟೆ ಮಾಡುತ್ತಿದ್ದರು. ತಾವು ನಿಧನರಾದವರಿಗೆ ಅಂತಿಮ ನಮನ ಸಲ್ಲಿಸಲೆಂದು ಇಲ್ಲಿಗೆ ಬಂದಿದ್ದೇವೆ ಎಂಬ ಪ್ರಜ್ಞೆಯೂ ಆ ಜನರಲ್ಲಿ ಕಾಣಿಸಲಿಲ್ಲ. ನಿಜಕ್ಕೂ ಅಸಹ್ಯ ಎನಿಸಿತು,” ಎಂದು ಬಿಗ್ ಬಿ ಬೇಸರ ವ್ಯಕ್ತಪಡಿಸಿದ್ದಾರೆ.