ನವದೆಹಲಿ: ಅತ್ಯಾಚಾರ ಸಂತ್ರಸ್ತೆಗೆ ಅತ್ಯಾಚಾರಿ ಜತೆ ರಾಜಿ ಮಾಡಿಕೊಳ್ಳವಂತೆ ತಮಿಳುನಾಡು ನ್ಯಾಯಮೂರ್ತಿ ಕಳೆದ ವಾರ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ತಪ್ಪು ಎಂದಿದೆ.
ಮಹಿಳೆಯ ದೇಹ ಎಂಬುದು ಆಕೆಗೆ ದೇಗುಲವಿದ್ದಂತೆ ಅಲ್ಲಿ ಮಧ್ಯಸ್ಥಿಕೆ ವಹಿಸುವುದು ಸಲ್ಲ. ಅದೇ ವೇಳೆ ಇಂಥಾ ಪ್ರಕರಣಗಳಲ್ಲಿ ರಾಜಿ ಆಗುವುದರಿಂದ ಮಹಿಳೆಯ ಘನತೆಗೆ ಧಕ್ಕೆ ಉಂಟಾಗುವುದು ಎಂದು ಸುಪ್ರೀಂಕೋರ್ಟ್ ಹೇಳಿದೆ.
2008ರಲ್ಲಿ 15 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಅಪರಾಧದ ಮೇಲೆ ವಿ ಮೋಹನ್ ಎಂಬಾತನನ್ನು 7 ವರ್ಷದ ಶಿಕ್ಷೆಗೆ ಗುರಿ ಮಾಡಲಾಗಿತ್ತು. ಅತ್ಯಾಚಾರದಿಂದಾಗಿ ಆಕೆ ಗರ್ಭಿಣಿಯಾಗಿದ್ದಳು.ಆಕೆಗೆ ಈಗ 6 ವರ್ಷದ ಮಗಳಿದ್ದಾಳೆ. ಈಗ ಆಕೆಯೊಂದಿಗೆ ಬದುಕುವ ಇಚ್ಛೆ ವ್ಯಕ್ತಪಡಿಸಿದ್ದ ಮೋಹನ್, ಶಿಕ್ಷೆ ತೀರ್ಪು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದ. ಈ ಅರ್ಜಿಯನ್ನು ಪುರಸ್ಕರಿಸಿದ ಹೈಕೋರ್ಟ್, ಸಂತ್ರಸ್ತೆ ಜತೆ ಅತ್ಯಾಚಾರಿ ಮದುವೆಯಾಗಲು ಒಪ್ಪಿದ ಆತನಿಗೆ ಜಾಮೀನು ನೀಡಿತ್ತು.
ಅತ್ಯಾಚಾರಿಗೆ ಸಂತ್ರಸ್ತೆ ಜತೆ ರಾಜಿ ಮಾಡಿಕೊಳ್ಳಲು ಹೇಳಿ ಮದ್ರಾಸ್ ಹೈಕೋರ್ಟ್ ಕಳೆದ ವಾರ ಆತನಿಗೆ ಜಾಮೀನು ನೀಡಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಅಚ್ಚರಿ ಎಂಬಂತೆ ಹೈಕೋರ್ಟ್ ಆದೇಶವನ್ನು ರಾಜ್ಯ ಮಹಿಳಾ ಆಯೋಗ ಸ್ವಾಗತಿಸಿತ್ತು.