ಪುಣೆ: ಸಾಮಾಜಿಕ ಕಾರ್ಯಕರ್ತ ಹಾಗೂ ಭ್ರಷ್ಟಾಚಾರ ವಿರೋಧಿ ಆಂದೋಲನದ ನಾಯಕ ಅಣ್ಣಾ ಹಜಾರೆ ಅವರ ಗ್ರಾಮ ರಾಲೇಗನ್ ಸಿದ್ದಿ ಪ್ರವಾಸಿ ತಾಣಗಳ ಪಟ್ಟಿಗೆ ಸೇರ್ಪಡೆಗೊಂಡಿದೆ.
ಪ್ರವಾಸ ಕೈಗೊಳ್ಳಲಾಗದ ಸ್ಥಿತಿಯಲ್ಲಿರುವ ಜನರಿಗಾಗಿ ಮಹಾರಾಷ್ಟ್ರ ಪ್ರವಾಸೋದ್ಯಮ ಇಲಾಖೆ ಸಾಮಾಜಿಕ ಪ್ರವಾಸೋದ್ಯಮ ಎಂಬ ಹೊಸ ಯೋಜನೆಯನ್ನು ಕೈಗೊಂಡಿದ್ದು, ಈ ಯೋಜನೆಯಡಿ ಜನರು ಕಡಿಮೆ ವೆಚ್ಚದಲ್ಲಿ ರಾಲೇಗನ್ ಸಿದ್ದಿಯಂತಹ ಮಾದರಿ ಗ್ರಾಮಗಳಿಗೆ ಭೇಟಿ ನೀಡಬಹುದಾಗಿದೆ.
ಈ ಮಾದರಿ ಗ್ರಾಮಗಳ ಪೈಕಿ ರಾಲೇಗನ್ ಸಿದ್ದಿ ಸೇರಿದಂತೆ ಆನಂದವನ, ಹಿವಾರೆ ಬಜಾರ್ ಸೇರಿದಂತೆ ಇತರೆ ಸ್ಥಳಗಳಿಗೂ ಭೇಟಿ ನೀಡಿ, ಆ ಗ್ರಾಮದ ಅಭಿವೃದ್ಧಿಕಾರರೊಂದಿಗೆ ಚರ್ಚಿಸಬಹುದಾಗಿದೆ.
ಈ ಪ್ರವಾಸ 8 ದಿನಗಳ ಅವಧಿಗಳಾಗಿರುತ್ತದೆ. ಪ್ರವಾಸ ಪ್ಯಾಕೇಜ್ನಲ್ಲಿ ಆನಂದ್ ವನ, ಹೇಮಲ್ಕಾಸ, ಸೋಮನಾಥ್. ಸರ್ಚ್(ಶೈಕ್ಷಣಿಕ, ಕ್ರಿಯಾ ಮತ್ತು ಸಮುದಾಯ ಆರೋಗ್ಯ ಸಂಶೋಧನಾ ಸಮಾಜ) ಮತ್ತು ತಡೋಬದೊಂದಿಗೆ ರಾಲೇಗನ್ ಸಿದ್ದಿ, ಹಿವಾರೆಬಜಾರ್, ಸ್ನೇಹಾಲಯ್, ಸವಾಳಿ ಮತ್ತು ವಿಜ್ಞಾನ ಆಶ್ರಮ ಸೇರಿದೆ ಎಂದು ಮಹಾರಾಷ್ಟ್ರ ಪ್ರವಾಸೋದ್ಯಮ ಇಲಾಖಾ ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೆ ಸುಮಾರು 250 ರಿಂದ 300 ಜನರು ಸಾಮಾಜಿಕ ಪ್ರವಾಸೋದ್ಯಮ ಮೂಲಕ ಅಣ್ಣಾ ಹಜಾರೆ ಮತ್ತು ಬಾಬಾ ಆಮ್ಟೆ ಪುತ್ರ ವಿಕಾಸ್ ಅವರನ್ನು ಭೇಟಿ ಮಾಡಲು ಸಿದ್ದರಿದ್ದು ಇಲಾಖೆ ಸಹ ಇವರೊಂದಿಗೆ ಸಂಪರ್ಕದಲ್ಲಿದೆ. ಹಾಗಾಗಿ ಈ ಪ್ರವಾಸೋಧ್ಯಮದ ಮೂಲಕ ಜನರು ಮಾದರಿ ವ್ಯಕ್ತಿಗಳ ಗ್ರಾಮಕ್ಕೆ ಭೇಟಿ ನೀಡುವುದು ಮಾತ್ರವಲ್ಲದೇ ಆ ವ್ಯಕ್ತಿಗಳನ್ನೂ ಭೇಟಿಯಾಗಿ ಅವರೊಂದಿಗೆ ಮಾತುಕತೆ ನಡೆಸಬಹುದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.