ಪಾಟ್ನಾ: ಇಬ್ಬರು ಶಾಲಾ ವಿದ್ಯಾರ್ಥಿಗಳ ಸಾವಿಗೆ ಸಂಬಂಧಿಸಿದಂತೆ ಆಕ್ರೋಶಗೊಂಡಿದ್ದ ಉದ್ರಿಕ್ತ ಗುಂಪೊಂದು ಶಾಲಾ ನಿರ್ದೇಶಕರನ್ನು ಥಳಿಸಿ ಹತ್ಯೆಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದ್ದ ವೀಡಿಯೋ ದೃಶ್ಯಾವಳಿಗಳಿಂದ ಆರೋಪಿಗಳನ್ನು ಗುರುತಿಸಿ ವಿವಿಧ ಪ್ರದೇಶಗಳಲ್ಲಿ ವಾಸವಾಗಿದ್ದ ಆರು ಆರೋಪಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಮೋಹನ್ ಜೈನ್ ಹೇಳಿದ್ದಾರೆ.
ಪ್ರಮುಖ ಆರೋಪಿ ಧರ್ಮವೀರ ಕುಮಾರ್ ಎಂದು ಗುರುತಿಸಲಾಗಿದ್ದು, ಈತ ಮೃತ ವಿದ್ಯಾರ್ಥಿ ಸಾಗರ ಅವರ ತಾಯಿ ಕಡೆಯ ಸಂಬಂಧಿ. ಶಾಲಾ ನಿರ್ದೇಶಕ ಸಿನ್ಹಾ ಅವರನ್ನು ಬಿದರಿನ ಬಾಂಬುವಿನಿಂದ ಹಿಗ್ಗಾ–ಮುಗ್ಗಾ ಹೊಡೆದವರು ಇವರೇ’ ಎಂದೂ ಅವರು ತಿಳಿಸಿದ್ದಾರೆ.
ಘಟನೆ ಹಿನ್ನಲೆ: ದೇವೇಂದ್ರ ಪ್ರಸಾದ್ ಶಾಲೆಯ ವಿದ್ಯಾರ್ಥಿನಿಲಯದಲ್ಲಿದ್ದ ಇಬ್ಬರು ಹುಡುಗರು ಕಳೆದ ವಾರ ಕಾಣೆಯಾಗಿದ್ದರು. ಮರುದಿನ ವಿದ್ಯಾರ್ಥಿಗಳ ಶವ ಶಾಲೆ ಪಕ್ಕದಲ್ಲಿರುವ ಕೆರೆಯಲ್ಲಿ ಪತ್ತೆಯಾಗಿದ್ದವು. ಕಲಬೆರಕೆ ಆಹಾರ ನೀಡುತ್ತಿರುವ ಬಗ್ಗೆ ಇಬ್ಬರು ವಿದ್ಯಾರ್ಥಿಗಳು ದೂರು ನೀಡಿದ್ದರಂತೆ. ಈ ಹಿನ್ನಲೆಯಲ್ಲಿ ಕುಪಿತಗೊಂಡ ನಿರ್ದೇಶಕರು ಅವರನ್ನು ಮನಬಂದಂತೆ ಥಳಿಸಿದ್ದರು. ಪೆಟ್ಟು ತಿಂದ ವಿದ್ಯಾರ್ಥಿಗಳು ಕೊನೆಯುಸಿರೆಳೆದಿದ್ದರು. ನಂತರ ವಿದ್ಯಾರ್ಥಿಗಳ ಶವಗಳನ್ನು ಕೆರೆಗೆ ಎಸೆಯಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಇದರಿಂದ ಕೋಪಗೊಂಡ ಪೋಷಕರು ಮತ್ತು ಸಂಬಂಧಿಕರು ಮುಖ್ಯೋಪಾಧ್ಯಾಯರೂ ಆಗಿರುವ ಶಾಲಾ ನಿರ್ದೇಶಕರನ್ನು ಲಾಠಿ ಹಾಗೂ ಬೆತ್ತದಿಂದ ಅಮಾನುಷವಾಗಿ ಥಳಿಸಿದ್ದಾರೆ. ಗಾಯಗೊಂಡಿದ್ದ ಅವರನ್ನು ಪೊಲೀಸರು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದರು.
ವಿದ್ಯಾರ್ಥಿಗಳ ಮರಣೋತ್ತರ ವರದಿ ಪ್ರಕಾರ, ವಿದ್ಯಾರ್ಥಿಗಳನ್ನು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ಅವರ ದೇಹದ ಮೇಲೆ ಥಳಿಸಿದ ಯಾವುದೇ ಗುರುತುಗಳು ಇರಲಿಲ್ಲ ಎಂದು ತಿಳಿದು ಬಂದಿದೆ.