ಶ್ರೀನಗರ: ಭಯೋತ್ಪಾದನೆ ನಿಗ್ರಹಕ್ಕೆ ಎಲ್ಲಾ ದೇಶಗಳು ಶತಾಯಗತಾಯ ಪ್ರಯತ್ನಿಸಿದ್ದರೇ ಇದಕ್ಕೆ ಅಪವಾದವೆಂಬಂತೆ ಭಯೋತ್ಪಾದಕ ಕೃತ್ಯಗಳಿಗೆ ಕೊಲ್ಲಿ ರಾಷ್ಟ್ರಗಳಿಂದ ಭಾರೀ ಪ್ರಮಾಣದ ಹವಾಲಾ ಹಣ ಹರಿದು ಬರುತ್ತಿದ್ದು, ಕಾಶ್ಮೀರಿ ಯುವಜನತೆ ಭಯೋತ್ಪಾದನೆ ಕಡೆ ವಾಲುತ್ತಿದ್ದಾರೆ ಎಂದು ವರದಿಯೊಂದು ಹೇಳಿದೆ.
ಕಾಶ್ಮೀರದ ಉತ್ತರ ಮತ್ತು ದಕ್ಷಿಣ ಮೇಲೆ ಹೆಚ್ಚು ಗಮನವನ್ನು ಕೇಂದ್ರೀಕರಿಸಿರುವ ಭಯೋತ್ಪಾದಕ ಸಂಘಟನೆಗಳು ಅಲ್ಲಿನ ಯುವಕರಿಗೆ ಬಾರಿ ಮೊತ್ತದ ಹಣ ನೀಡುವ ಮೂಲಕ ಭಯೋತ್ಪಾದನೆಗೆ ಪ್ರೋತ್ಸಾಹಿಸುತ್ತಿವೆ. ಇದು ದೇಶದ ಭದ್ರತೆಗೆ ಒಂದು ಕಷ್ಟದ ಸವಾಲಾಗಿ ಪರಿಣಮಿಸಿದ್ದು ಅಲ್ಲದೆ ರಾಜ್ಯ ಪೊಲೀಸರಿಗೆ ದೊಡ್ಡ ತಲೆ ನೋವಾಗಿದೆ ಎಂದು ರಿಸರ್ಚ್-ಅನಾಲಿಸಿಸ್ ವಿಂಗ್ (ಆರ್ಎಡಬ್ಲ್ಯೂ)ನ ಮಾಜಿ ಮುಖ್ಯಸ್ಥ ಎ.ಎಸ್. ದುಲಾತ್ ಅಭಿಪ್ರಾಯಪಟ್ಟಿದ್ದಾರೆ.
ದಕ್ಷಿಣ ಕಾಶ್ಮೀರದ ಟ್ರಾಲ್, ಒಟಾಪೊರ, ಪಂಜ್ಗಾಂವ್ ಮತ್ತು ಯರಿಪೊರ ಹಾಗೂ ಉತ್ತರ ಕಾಶ್ಮೀರದ ಪಲ್ಹಾಲನ್ನಿಂದ ಸೋಪೊರ್ವರೆಗಿನ ಪ್ರದೇಶದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ (ಹೆಚ್ಎಂ) ಭಯೋತ್ಪಾದಕ ತಂಡವು ಸಕ್ರಿಯವಾಗಿ ಯುವಕರನ್ನು ಸೆಳೆಯುವಲ್ಲಿ ನಿರತವಾಗಿದೆ. ಇದರೊಂದಿಗೆ ಜೈಷ್-ಇ-ಮೊಹ್ಮದ್ ಸಂಘಟನೆ ಕೂಡ ಸಾಕಷ್ಟು ಕೆಲಸ ಮಾಡುತ್ತಿದೆ ಎಂದು ದುಲಾತ್ ಹೇಳಿದ್ದಾರೆ.
ಹಿಜ್ಬುಲ್ ಮುಜಾಹಿದೀನ್ ಮತ್ತು ಜೈಷ್-ಎ-ಮೊಹ್ಮದ್ ಸಂಘಟನೆಗಳೆರಡೂ ಕಾಶ್ಮೀರಿ ಯುವಕರಿಗೆ ಆಮಿಷವೊಡ್ಡಿ ಅವರ ಬ್ರೈನ್ವಾಷ್ ಮಾಡಿ ಹಾದಿತಪ್ಪಿಸುತ್ತಿದ್ದಾರೆ. ಇದು ಭದ್ರತಾ ಪಡೆಗಳು ಮತ್ತು ಪೊಲೀಸ್ ಇಲಾಖೆಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ ಎಂದು ಅವರು ತಿಳಿಸಿದ್ದಾರೆ.