ನವದೆಹಲಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿ 1975ರಲ್ಲಿ ಹೇರಿದ್ದ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಬಂಧನಕ್ಕೊಳಗಾಗಿದ್ದ ನಾಯಕರನ್ನು ಸನ್ಮಾನಿಸಲು ಆರೆಸ್ಸೆಸ್ ಆಯೋಜಿಸಿದ್ದ ಸಮಾರಂಭಕ್ಕೆ ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಆಡ್ವಾಣಿಯವರಿಗೆ ಆಹ್ವಾನ ನೀಡದಿರುವುದು ಪಕ್ಷದ ಹಿರಿಯ ನಾಯಕರಲ್ಲಿ ಅಸಮಾಧಾನ ಮೂಡಿಸಿದೆ.
ಪ್ರಸ್ತುತ ಕೆಲ ಸಶಕ್ತಶಾಲಿ ಶಕ್ತಿಗಳು ಪ್ರಜಾಪ್ರಭುತ್ವವನ್ನು ನಾಶಗೊಳಿಸಿ ಮತ್ತೆ ತುರ್ತುಪರಿಸ್ಥಿತಿ ಹೇರುವು ಸಾಧ್ಯತೆಗಳಿಲ್ಲದಿಲ್ಲ ಎಂದು ಆಡ್ವಾಣಿ ಹೇಳಿಕೆ ನೀಡಿರುವುದು ಆರೆಸ್ಸೆಸ್ ಆಕ್ರೋಶಕ್ಕೆ ಕಾರಣವಾಗಿರಬಹುದು ಎಂದು ಮೂಲಗಳು ತಿಳಿಸಿವೆ.
ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಜೈಲು ಸೇರಿದ್ದ ಹಿರಿಯ ನಾಯಕ ಆಡ್ವಾಣಿಯವರಿಗೆ ಸನ್ಮಾನ ಮಾಡುವ ಬದಲು ಉದ್ದೇಶಪೂರ್ವಕವಾಗಿ ಅಪಮಾನ ಮಾಡಲು ಆಹ್ವಾನ ನೀಡಿಲ್ಲ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಗುಡುಗಿದ್ದಾರೆ.
ಬಿಜೆಪಿ ಸಂಸ್ಥಾಪಕ ಆಡ್ವಾಣಿ ಹೊರತುಪಡಿಸಿ ದೆಹಲಿಯ ಮಾವಲಂಕರ್ ಹಾಲ್ನಲ್ಲಿ ನಡೆದ ಸಮಾರಂಭಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸೇರಿದಂತೆ ಅನೇಕ ಬಿಜೆಪಿ ನಾಯಕರಿಗೆ ಆಹ್ವಾನ ನೀಡಲಾಗಿತ್ತು.
87 ವರ್ಷ ವಯಸ್ಸಿನ ಆಡ್ವಾಣಿ 40 ವರ್ಷಗಳ ಹಿಂದೆ ಹೇರಲಾಗಿದ್ದ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಜೈಲು ಪಾಲಾದ ಬಿಜೆಪಿ ನಾಯಕರಲ್ಲಿ ಪ್ರಮುಖರಾಗಿದ್ದರು. ಆಡ್ವಾಣಿಯವರಿಗೆ ಆಹ್ವಾನ ನೀಡುವುದನ್ನು ಮರೆತ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ತುರ್ತುಪರಿಸ್ಥಿತಿಯಲ್ಲಿ ಬಿಜೆಪಿ ನಾಯಕರ ಹೋರಾಟ ಶ್ಲಾಘಿಸಿ ಅಚ್ಚರಿ ಮೂಡಿಸಿದರು.